ಇಂಫಾಲ್: ಮಣಿಪುರ ಮುಖ್ಯಮಂತ್ರಿಯಾಗಿ ಬಿರೆನ್ ಸಿಂಗ್ ಅವರು ಎರಡನೇ ಅವಧಿಗೆ ಮುಂದುವರಿಯಲಿದ್ದಾರೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಪ್ರಕಟಿಸಿದ್ದಾರೆ. ನಾಯಕನ ಆಯ್ಕೆ ಪ್ರಕ್ರಿಯೆಗಾಗಿ ನಿರ್ಮಲಾ ಅವರನ್ನು ವೀಕ್ಷಕಿಯಾಗಿ ಬಿಜೆಪಿ ಕಳುಹಿಸಿತ್ತು. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯು ಬಿರೆನ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದೆ ಎಂದು ನಿರ್ಮಲಾ ಹೇಳಿದ್ದಾರೆ.
ಸರ್ಕಾರ ರಚಿಸುವಂತೆ ಬಿರೆನ್ ಸಿಂಗ್ ಅವರನ್ನು ಮಣಿಪುರ ರಾಜ್ಯಪಾಲ ಗಣೇಶನ್ ಅವರು ಆಹ್ವಾನಿಸಿದ್ದಾರೆ.
ಮಣಿಪುರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರದ ಹತ್ತು ದಿನ ಮುಖ್ಯಮಂತ್ರಿ ಆಯ್ಕೆಯ ವಿಚಾರದಲ್ಲಿ ಅನಿಶ್ಚಿತ ಸ್ಥಿತಿ ಮನೆ ಮಾಡಿತ್ತು. ಬಿರೆನ್ ಮತ್ತು ಹಿರಿಯ ಮುಖಂಡ ವಿಶ್ವಜಿತ್ ಸಿಂಗ್ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿತ್ತು. ಇಬ್ಬರೂ ಮುಖಂಡರು ಎರಡು ಬಾರಿ ದೆಹಲಿಗೆ ಹೋಗಿ ಪಕ್ಷದ ನಾಯಕರನ್ನು ಭೇಟಿಯಾಗಿದ್ದರು.
ನಿರ್ಮಲಾ ಮತ್ತು ಸಹ ವೀಕ್ಷಕ ಕಿರಣ್ ರಿಜಿಜು ಅವರು ಭಾನುವಾರ ಬೆಳಿಗ್ಗೆಯೇ ಇಂಫಾಲ್ಗೆ ಆಗಮಿಸಿದ್ದರು. ಕೇಂದ್ರ ಸಚಿವ ಭೂಪೇಂದ್ರ ಯಾದವ್, ಮಣಿಪುರ ರಾಜ ವಂಶಸ್ಥ ಹಾಗೂ ಬಿಜೆಪಿ ಸಂಸದ ಲೈಶೆಂಬಾ ಸನಜೋಬ, ಪಕ್ಷದ ವಕ್ತಾರ ಸಂಬಿತ್ ಪಾತ್ರಾ ಅವರೂ ಸಭೆಯಲ್ಲಿ ಭಾಗಿಯಾಗಿದ್ದರು.
60 ಸದಸ್ಯ ಬಲದ ಮಣಿಪುರ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 32 ಸ್ಥಾನಗಳನ್ನು ಗೆದ್ದಿದೆ.