ಭುವನೇಶ್ವರ: ಲೋಕಸಭೆ ಮತ್ತು ಒಡಿಶಾ ವಿಧಾನಸಭೆ ಚುನಾವಣಾ ಪೂರ್ವ ಬಿಜೆಡಿ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಬಿಜೆಪಿ ನಿರ್ಧಾರ ಇಂದು ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಮೂರು ದಿನಗಳಿಂದ ನವದೆಹಲಿಯಲ್ಲಿ ರಾಜ್ಯ ಬಿಜೆಪಿಯ ಪ್ರಮುಖ ನಾಯಕರು ಸರಣಿ ಸಭೆಗಳನ್ನು ನಡೆಸಿದ್ದಾರೆ ಎಂದು ತಿಳಿಸಿವೆ.
ಒಡಿಶಾ ಬಿಜೆಪಿ ಘಟಕದ ಅಧ್ಯಕ್ಷ ಮನಮೋಹನ್ ಸಾಮಲ್, ಚುನಾವಣಾ ಉಸ್ತುವಾರಿ ವಿಜಯ್ ಪಾಲ್ ಸಿಂಗ್ ತೋಮರ್ ಮತ್ತು ಇತರೆ ನಾಯಕರು ರಾಷ್ಟ್ರ ರಾಜಧಾನಿಯಲ್ಲಿ ಬೀಡು ಬಿಟ್ಟಿದ್ದಾರೆ.
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ನಿವಾಸದಲ್ಲಿ ರಾಜ್ಯದ ನಾಯಕರು ಸರಣಿ ಸಭೆಗಳನ್ನು ನಡೆಸಿದ್ದಾರೆ.
ಮೈತ್ರಿಗೆ ಬಿಜೆಪಿಯ ಒಂದು ವಿಭಾಗದ ನಾಯಕರ ವಿರೋಧವಿದೆ. ಮೈತ್ರಿ ಸಾಧ್ಯತೆಯ ಕುರಿತು ರಾಜ್ಯದ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಲು ಪ್ರಧಾನ್ ಅವರನ್ನು ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.
ರಾಜ್ಯದ ನಾಯಕರ ಅಭಿಪ್ರಾಯಗಳನ್ನು ಕೇಂದ್ರದ ಉನ್ನತ ನಾಯಕರಿಗೆ ಪ್ರಧಾನ್ ತಿಳಿಸಲಿದ್ದು, ಇಂದು ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.
ಮತ್ತೊಂದೆಡೆ ಬಿಜೆಪಿ ನಿರ್ಣಯಕ್ಕಾಗಿ ಬಿಜೆಡಿ ಕಾಯುತ್ತಿದೆ.
ಮಾರ್ಚ್ 5ರಂದು ಪ್ರಧಾನಿ ನರೇಂದ್ರ ಮೋದಿ ಒಡಿಶಾಗೆ ಭೇಟಿ ನೀಡಿದ ಬಳಿಕ ಬಿಜೆಪಿ ಮತ್ತು ಬಿಜೆಡಿ ನಡುವೆ ಮೈತ್ರಿ ಸಂಬಂಧ ಮಾತುಕತೆ ಬಿರುಸು ಪಡೆದಿತ್ತು.
ಒಡಿಶಾದಲ್ಲಿ 147 ವಿಧಾನಸಭಾ ಮತ್ತು 21 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.