ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿಯು ಮೋದಿ ಬದಲು ಹೊಸ ನಾಯಕನನ್ನು ಆಯ್ಕೆ ಮಾಡಬೇಕು ಎಂದ ಟಿಎಂಸಿ: ಕಾರಣವೇನು?

Published 10 ಜೂನ್ 2024, 13:19 IST
Last Updated 10 ಜೂನ್ 2024, 13:19 IST
ಅಕ್ಷರ ಗಾತ್ರ

ಕೋಲ್ಕತ್ತ: ತಮ್ಮನ್ನೇ ಪ್ರಧಾನವಾಗಿಸಿಕೊಂಡು ದೇಶದಾದ್ಯಂತ ಪ್ರಚಾರ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಚುನಾವಣೆಯಲ್ಲಿ ಬಹುಮತ ಸಾಧಿಸಲು ವಿಫಲರಾಗಿದ್ದಾರೆ. ಹಾಗಾಗಿ, ಬಿಜೆಪಿಯು ಅವರ ಬದಲು ಹೊಸ ನಾಯಕನನ್ನು ಆಯ್ಕೆ ಮಾಡಬೇಕು ಎಂದು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸಂಸದೆ ಸಾಗರಿಕಾ ಘೋಷ್‌ ಸೋಮವಾರ ಒತ್ತಾಯಿಸಿದ್ದಾರೆ.

ಮೋದಿ ಅವರ ಪ್ರಮಾಣವಚನ ಸಮಾರಂಭ ಸಂಪೂರ್ಣ ಮುಕ್ತಾಯವಾಗುವವರೆಗೆ ಟಿಎಂಸಿ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಮನೆಯ ಎಲ್ಲ ದೀಪಗಳನ್ನು ಆರಿಸಿ ಕತ್ತಲಿನಲ್ಲಿ ಕುಳಿತಿದ್ದರು ಎಂದು ಘೋಷ್‌ ಹೇಳಿದ್ದಾರೆ.‌

ಟಿಎಂಸಿ ರಾಜ್ಯಸಭೆ ಸದಸ್ಯರಾಗಿರುವ ಘೋಷ್‌, 'ನರೇಂದ್ರ ಮೋದಿ ಅವರ ಪ್ರಮಾಣವಚನ ಸಮಾರಂಭವನ್ನು ಸಂಭ್ರಮಿಸುತ್ತಿರುವ ಎಲ್ಲರಿಗೂ, ದೇಶದ ಏಕೈಕ ಮಹಿಳಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಂದ ಒಂದು ಸಂದೇಶ. ಜನಾದೇಶವನ್ನು ಕಳೆದುಕೊಂಡ ಹಾಗೂ ಜನರಿಂದ ತಿರಸ್ಕೃತಗೊಂಡ ಪ್ರಧಾನ ಮಂತ್ರಿಯ ಪ್ರಮಾಣವಚನದ ಇಡೀ ಸಮಾರಂಭ ಮುಗಿಯುವವರೆಗೆ, ಅವರು (ಮಮತಾ ಬ್ಯಾನರ್ಜಿ) ತಮ್ಮ ನಿವಾಸದ ಎಲ್ಲಾ ದೀಪಗಳನ್ನು ಆರಿಸಿ ಕತ್ತಲಲ್ಲಿ ಕುಳಿತಿದ್ದರು' ಎಂದು ಟ್ವೀಟ್‌ ಮಾಡಿದ್ದಾರೆ.

ಮುಂದುವರಿದು, 'ಅಯೋಧ್ಯೆಯಲ್ಲಿ ಸೋಲು, ವಾರಾಣಸಿಯಲ್ಲಿ ಬಹುತೇಕ ಸೋಲುವ ಸ್ಥಿತಿ, ದೇಶದಾದ್ಯಂತ ತಮ್ಮನ್ನೇ ಪ್ರಧಾನವಾಗಿರಿಸಿಕೊಂಡು ಪ್ರಚಾರ ನಡೆಸಿದರೂ ಮೋದಿಗೆ ಬಹುಮತ ಸಿಗಲಿಲ್ಲ. ಬಿಜೆಪಿಯು ಅವರನ್ನು ಬದಲಿಸಿ, ಹೊಸ ನಾಯಕನನ್ನು ಆಯ್ಕೆ ಮಾಡಬೇಕು' ಎಂದು ಒತ್ತಾಯಿಸಿದ್ದಾರೆ.

‌ಮೋದಿ ಅವರು ಸತತ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಭಾನುವಾರ ರಾತ್ರಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಟಿಎಂಸಿ ಪಕ್ಷದ ಯಾವ ನಾಯಕರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT