ನವದೆಹಲಿ: ಚಂದ್ರಯಾನ–3 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಸಂದರ್ಭದ ವಿಶೇಷ ನೇರ ಪ್ರಸಾರ ಕಾರ್ಯಕ್ರಮ ಆಯೋಜಿಸುವಂತೆ ಐಐಟಿ, ಐಐಎಂ ಸೇರಿದಂತೆ ಎಲ್ಲ ವಿಶ್ವ ವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಹೇಳಿದೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಕೆ.ಸಂಜಯ್ ಮೂರ್ತಿ, 'ಭಾರತದ ಚಂದ್ರಯಾನ–3 ಯೋಜನೆಯ ಲ್ಯಾಂಡಿಂಗ್ ಪ್ರಕ್ರಿಯೆಯು ಸ್ಮರಣೀಯ ಸಂದರ್ಭವಾಗಿದೆ. ಇದು ಯುವಕರಲ್ಲಿ ಕುತೂಹಲ ಉಂಟುಮಾಡುವುದಷ್ಟೇ ಅಲ್ಲದೆ, ಆವಿಷ್ಕಾರ ಭಾವವನ್ನು ಪ್ರೇರೇಪಿಸಲಿದೆ. ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ನಮ್ಮಲ್ಲಿ ಗಾಢವಾದ ಹೆಮ್ಮೆಯ ಭಾವನೆ ಮೂಡಿಸಲಿದ್ದು, ಎಲ್ಲರೂ ಒಂದಾಗಿ ಸಂಭ್ರಮಿಸುವಂತೆ ಮಾಡಲಿದೆ' ಎಂದಿದ್ದಾರೆ.
'ಈ ಸಂದರ್ಭವು ವೈಜ್ಞಾನಿಕ ಚಿಂತನೆ ಮತ್ತು ಅನ್ವೇಷಣಾ ಮನೋಭಾವಕ್ಕೆ ಇಂಬು ನೀಡಲಿದೆ' ಎಂದೂ ಹೇಳಿದ್ದಾರೆ.
ವಿಶ್ವವಿದ್ಯಾಲಯಗಳ ಅನುದಾನ ಆಯೋಗವೂ (ಯುಜಿಸಿ) ಶೈಕ್ಷಣಿಕ ಸಂಸ್ಥೆಗಳಿಗೆ ಇದೇ ರೀತಿಯ ನಿರ್ದೇಶನವನ್ನು ನೀಡಿದೆ. ಸಂಜೆ 5.30ರಿಂದ 6.30ರ ವರೆಗೆ ನೇರಪ್ರಸಾರ ಆಯೋಜಿಸುವಂತೆ ತಿಳಿಸಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಹಿತಿ ಪ್ರಕಾರ, ಚಂದ್ರಯಾನ–3 ಯೋಜನೆಯ ವಿಕ್ರಮ್ ಲ್ಯಾಂಡರ್ ಇಂದು (ಆಗಸ್ಟ್ 23) ಸಂಜೆ 6.04ಕ್ಕೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯಲಿದೆ. ಸಾಫ್ಟ್ ಲ್ಯಾಂಡಿಂಗ್ಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.