ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದೆಹಲಿ ಕ್ಯಾಬಿನೆಟ್ ಸಚಿವರಾದ ಅತಿಶಿ ಮತ್ತು ಸೌರಭ್ ಭಾರಧ್ವಜ್, ‘ರಾಷ್ಟ್ರ ರಾಜಧಾನಿಯಲ್ಲಿರುವ ಕೊಳೆಗೇರಿ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸದೆ, ಕೊಳೆಗೇರಿಗಳನ್ನು ಅಮಾನವೀಯ ರೀತಿಯಲ್ಲಿ ಕೆಡವಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನವರಿ 9ರಂದು ನಡೆದ ಸಭೆಯಲ್ಲಿ, ದೆಹಲಿಯಲ್ಲಿರುವ ಎಲ್ಲಾ ಕೊಳೆಗೇರಿ ಪ್ರದೇಶಗಳನ್ನು ತೆರವುಗೊಳಿಸಲು ದೆಹಲಿ ಅಭಿವೃದ್ಧಿ ಪ್ರಾಧಿಕಾರ ಮತ್ತು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ಗಳಿಗೆ ಕೇಂದ್ರ ಸರ್ಕಾರವು ನಿರ್ದೇಶನ ನೀಡಿದೆ ಎಂದು ಅತಿಶಿ ತಿಳಿಸಿದರು.
ಕಳೆದ ವರ್ಷ ನವೆಂಬರ್ನಲ್ಲಿ, ನ್ಯಾಯಾಲಯದ ಆದೇಶದ ನಂತರ ಸುಂದರ್ ನರ್ಸರಿ ಮತ್ತು ದೆಹಲಿ ಪಬ್ಲಿಕ್ ಸ್ಕೂಲ್ ನಡುವಿನ ಕೊಳೆಗೇರಿ ಪ್ರದೇಶವನ್ನು ಕೆಡವಲಾಯಿತು. ಅಲ್ಲಿ ಚಿಂದಿ ಆಯುವವರು, ಬೀದಿ ಬದಿ ವ್ಯಾಪಾರಿಗಳು ಮತ್ತು ಕೂಲಿ ಕಾರ್ಮಿಕರು ಸೇರಿದಂತೆ ಸುಮಾರು 1,000 ದಿಂದ 1,500 ಜನರು ವಾಸಿಸುತ್ತಿದ್ದರು. ಅವರಿಗೆ ಬೇರೆಡೆಗೆ ಸ್ಥಳಾಂತರಗೊಳ್ಳಲು ಯಾವುದೇ ವ್ಯವಸ್ಥೆಯನ್ನು ಕಲ್ಪಿಸದೆ ಎರಡು ದಿನಗಳಲ್ಲಿ ಮನೆಗಳನ್ನು ಖಾಲಿ ಮಾಡುವಂತೆ ತಿಳಿಸಲಾಗಿದೆ ಎಂದು ನಿವಾಸಿಗಳು ಹೇಳಿಕೊಂಡಿದ್ದರು ಎಂದು ಅವರು ಹೇಳಿದರು.