ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಛತ್ತೀಸಗಢ: 14 ನಕ್ಸಲರ ಬಂಧನ

ಈ ಪೈಕಿ 11 ಮಂದಿಯ ತಲೆಗೆ ಒಟ್ಟಾರೆ ₹41 ಲಕ್ಷ ಇನಾಮು
Published 13 ಮೇ 2024, 16:32 IST
Last Updated 13 ಮೇ 2024, 16:32 IST
ಅಕ್ಷರ ಗಾತ್ರ

ಬಿಜಾಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ 14 ನಕ್ಸಲರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಆರು ಮಹಿಳೆಯರು ಹಾಗೂ ಎಂಟು ಪುರುಷರು ಇದ್ದಾರೆ ಎಂದು ಎಂದು ಅಧಿಕಾರಿಗಳು ಹೇಳಿದ್ದಾರೆ. 

ಹನ್ನೊಂದು ನಕ್ಸಲರ  ಒಟ್ಟಾರೆ ₹41 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. ಆ ಹನ್ನೊಂದು ಮಂದಿ ಕೂಡ ಬಂಧಿತರಲ್ಲಿ ಸೇರಿದ್ದಾರೆ. 

ಗಂಗಾಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಿಡಿಯಾ ಮತ್ತು ಮುಟ್ವೆಂಡಿ ಗ್ರಾಮ ಗ್ರಾಮಗಳ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಜಿಲ್ಲಾ ಮೀಸಲು ಪಡೆ ಮತ್ತು ಜಿಲ್ಲಾ ಪೊಲೀಸರ ಕಾರ್ಯಾಚರಣೆಯಲ್ಲಿ 14 ನಕ್ಸಲರನ್ನು ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ಹೇಳಿದ್ದಾರೆ. 

ವಿಚಾರಣೆ ವೇಳೆ ನಕ್ಸಲರು ನೀಡಿದ ಮಾಹಿತಿ ಮೇರೆಗೆ ಅವರ ಅಡಗಿಸಿಟ್ಟಿದ್ದ ನಾಲ್ಕು ಟಿಫಿನ್ ಬಾಂಬ್‌ಗಳು, ಎರಡು ಕುಕ್ಕರ್ ಬಾಂಬ್‌ಗಳು, ಸ್ಫೋಟಕಗಳು, ಕಾರ್ಡೆಕ್ಸ್ ವೈರ್, ಜಿಲಟಿನ್ ಕಡ್ಡಿಗಳು, ಸ್ಫೋಟಕಗಳು ಮತ್ತು ಮಾವೋವಾದಕ್ಕೆ ಸಂಬಂಧಿಸಿದ ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.  

ಗಂಗಾಲೂರು ಪ್ರದೇಶ ಸಮಿತಿಯ ಸದಸ್ಯರಾದ ಬಿಚ್ಚೆಂ ಯುಕಾ, ಶರ್ಮಿಳಾ ಕುರ್ಸಾಮ್ ಮತ್ತು ಲಕ್ಷ್ಮಿ ಟಾಟಿ ಅವರ ತಲೆಗೆ ತಲಾ ₹5 ಲಕ್ಷ ಇನಾಮು ಘೋಷಿಸಲಾಗಿತ್ತು. ನಾಲ್ವರು ಕೇಡರ್‌ಗಳಿಗೆ ತಲಾ ₹2 ಹಾಗೂ ಇಬ್ಬರಿಗೆ ₹1 ಲಕ್ಷ ಇನಾಮು ಘೋಷಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. 

ಮೇ 10ರಂದು ಪಿಡಿಯಾ ಗ್ರಾಮದ ಅರಣ್ಯದಲ್ಲಿ 12 ಗಂಟೆಗಳ ಕಾರ್ಯಾಚರಣೆ ಕೈಗೊಂಡಿದ್ದ ಭದ್ರತಾ ಪಡೆಗಳು, 12 ನಕ್ಸಲರನ್ನು ಹೊಡೆದುರುಳಿಸಿತ್ತು. ಜೊತೆಗೆ ಹಲವು ಶಂಕಿತರನ್ನು ವಶಕ್ಕೆ ಪಡೆಯಲಾಗಿತ್ತು. ಅಂದು ವಶಕ್ಕೆ ಪಡೆಯಲಾದವರ ಮಾಹಿತಿಯನ್ನು ಪೊಲೀಸರು ಈವರೆಗೆ ಬಹಿರಂಗಪಡಿಸಿಲ್ಲ. ಮತ್ತೊಂದೆಡೆ ಅಂದು ನಡೆದಿರುವುದು ನಕಲಿ ಎನ್‌ಕೌಂಟರ್ ಎಂದು ಗ್ರಾಮಸ್ಥರು ಮಾನವ ಹಕ್ಕುಗಳ ಹೋರಾಟಗಾರರು ದೂರಿದ್ದಾರೆ. 

ಅಲ್ಲದೆ, ಅಂದು ಎನ್‌ಕೌಂಟರ್‌ನಲ್ಲಿ ಮೃತಪಟ್ಟವರು ಕಾಡಿನಲ್ಲಿ ಸಿಗುವ ಎಲೆಯೊಂದನ್ನು ಕಿತ್ತಿಕೊಳ್ಳಲು ಹೋಗಿದ್ದ ಗ್ರಾಮಸ್ಥರಾಗಿದ್ದಾರೆ ಎಂದು ಗ್ರಾಮಸ್ಥರ ವಾದ. ಆದರೆ, ಈ ಆರೋಪವನ್ನು ಅಲ್ಲಗಳೆದಿರುವ ಪೊಲೀಸರು, ಹತ್ಯೆಗೀಡಾದವರು ನಕ್ಸಲರೇ ಆಗಿದ್ದು, ಅವರ ತಲೆಗೆ ಇನಾಮು ಘೋಷಣೆಯಾಗಿತ್ತು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT