ನವದೆಹಲಿ: ಶಾಲೆಗಳನ್ನು ಪುನರಾರಂಭಿಸುವ ಕುರಿತು ಕಾಲಮಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ ದೆಹಲಿಯ ಮೂಲದ 12ನೇ ತರಗತಿಯ ವಿದ್ಯಾರ್ಥಿಯೊಬ್ಬ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.
ದೆಹಲಿ ನಿವಾಸಿಯಾದ ಅಮರ್ ಪ್ರೇಮ್ ಪ್ರಕಾಶ್, ವಿದ್ಯಾರ್ಥಿ ಸಮುದಾಯದ ಭಾವನೆಗಳನ್ನು ಮತ್ತು ದೇಶದ ಭ್ರಾತೃತ್ವವನ್ನು ಪ್ರತಿಧ್ವನಿಸುತ್ತಿದ್ದು, ವಿಶೇಷವಾಗಿ ಹಿಂದುಳಿದ ಮತ್ತು ಧ್ವನಿ ಇಲ್ಲದ ಮಕ್ಕಳನ್ನು ಪ್ರತಿನಿಧಿಸುತ್ತಿರವುದಾಗಿ ಹೇಳಿಕೊಂಡಿದ್ದಾರೆ.
ವಕೀಲ ಪ್ರೇಮ್ ಪ್ರಕಾಶ್ ಮೆಹ್ರೋತ್ರಾ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ, ಶಾಲಾ ಮಕ್ಕಳನ್ನು ಭೌತಿಕವಾಗಿ ಶಾಲೆಗೆ ಹಾಜರಾಗದಂತೆ ದೂರವಿಡುವುದರಿಂದ ಅವರ ಮೇಲೆ ಉಂಟಾಗುತ್ತಿರುವ ಮಾನಸಿಕ ಮತ್ತು ವಾಸ್ತವಿಕ ಅರಿವಿನ ಅಭಾವದ ದುಷ್ಪರಿಣಾಮಗಳ ವಿಷಯವನ್ನು ಪ್ರಸ್ತಾಪಿಸಲು ಪ್ರಯತ್ನಿಸುತ್ತಿರುವುದಾಗಿ ಹೇಳಲಾಗಿದೆ.
‘ಶಿಕ್ಷಣ ಸಂಸ್ಥೆಯ ಸಹಜ ಮತ್ತು ಶೈಕ್ಷಣಿಕ ವಾತಾವರಣದಲ್ಲಿ ನಡೆಯುತ್ತಿದ್ದ ನಿಯಮಿತ ಶಾಲೆ ಮತ್ತು ಬೋಧನೆಯ ಅಭಾವವು ವಿದ್ಯಾರ್ಥಿ ಸಮುದಾಯದ ಮನಸ್ಸಿನಲ್ಲಿ ಅಳಿಸಲಾಗದ ಬರೆ ಎಳೆದಿದೆ. ವರ್ಚುವಲ್ ತರಗತಿಗಳು ವಿದ್ಯಾರ್ಥಿಗಳ ಹಿತಾಸಕ್ತಿಗೆ ಹಾನಿಕಾರಕ ಮಾತ್ರವಲ್ಲ, ತಾರತಮ್ಯ ಮತ್ತು ಅನ್ಯಾಯದ ವರ್ತನೆಗೆ ಸಮಾನವಾಗಿದೆ ಎನ್ನುವುದು ಕೂಡ ಸಾಬೀತಾಗಿದೆ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಶಾಲೆಗಳಲ್ಲಿ ವಿದ್ಯಾರ್ಥಿಗಳ ಭೌತಿಕ ಉಪಸ್ಥಿತಿ ಇಲ್ಲದೆ, ಟ್ಯೂಷನ್ ಮತ್ತು ಕೋಚಿಂಗ್ ತೆಗೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಒತ್ತಾಯಿಸಲಾಯಿತು. ಇದರಿಂದ ವಿದ್ಯಾರ್ಥಿ ಸಮೂಹ ಸಾಕಷ್ಟು ನೊಂದಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾಕಷ್ಟು ಸುರಕ್ಷತೆಗಳೊಂದಿಗೆ ಭೌತಿಕ ಹಾಜರಾತಿಯೊಂದಿಗೆ ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.