ನವದೆಹಲಿ:ಬಾಂಗ್ಲಾದೇಶ, ಅಫ್ಗಾನಿಸ್ಥಾನ ಹಾಗೂ ಪಾಕಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ ‘ಪೌರತ್ವ (ತಿದ್ದುಪಡಿ) ಮಸೂದೆ’ಯನ್ನು ಲೋಕಸಭೆಯಲ್ಲಿ ಮಂಗಳವಾರ ಮಂಡಿಸಲಾಯಿತು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸಂಸದರು ಕಲಾಪ ಬಹಿಷ್ಕರಿಸಿ ಹೊರ ನಡೆದರು.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಮಸೂದೆಯನ್ನು ಮಂಡಿಸಿದರು. ಈ ವೇಳೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಮಸೂದೆಗೆ ಆಕ್ಷೇಪ ವ್ಯಕ್ತಪಡಿಸಿದರು.
‘ಮಸೂದೆಯು ಅಸ್ಸಾಂಗಷ್ಟೇ ಸೀಮಿತವಾಗಿಲ್ಲ. ಇಡೀ ದೇಶಕ್ಕೇ ಅನ್ವಯವಾಗಲಿದೆ. ಪಾಕಿಸ್ತಾನದಂತಹ ದೇಶಗಳಲ್ಲಿ ಕಿರುಕುಳಕ್ಕೀಡಾಗುವ ಅಲ್ಪಸಂಖ್ಯಾತರಿಗೆ ಭಾರತವೊಂದೇ ಆಶಾಕಿರಣವಾಗಿದೆ. ಮಸೂದೆ ಬಗ್ಗೆ ಚರ್ಚೆಗೆ ಸಿದ್ಧ‘ ಎಂದು ರಾಜನಾಥ್ ಸಿಂಗ್ ಹೇಳಿದರು. ಇದಕ್ಕೆ ಕಿವಿಗೊಡದ ಪ್ರತಿಪಕ್ಷದ ಸಂಸದರು ಕಲಾಪದಿಂದ ಹೊರನಡೆದರು.
ಪೌರತ್ವ (ತಿದ್ದುಪಡಿ) ಮಸೂದೆ ವಿರೋಧಿಸಿಈಶಾನ್ಯ ರಾಜ್ಯಗಳ 8 ಪ್ರಭಾವಿ ವಿದ್ಯಾರ್ಥಿ ಸಂಘಟನೆಗಳು, ಅಸ್ಸಾಂನ 40 ಸಾಮಾಜಿಕ ಸಂಘಟನೆಗಳು ಅಸ್ಸಾಂನಲ್ಲಿ ಇಂದು 11 ತಾಸ್ ಬಂದ್ ಆಚರಿಸುತ್ತಿವೆ.
ಮೇಲ್ಜಾತಿಗೆ ಶೇ 10 ಮೀಸಲು ಮಸೂದೆ ಮಂಡನೆ
ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ (ಈವರೆಗೆ ಮೀಸಲಾತಿ ಪರಿಧಿಯ ಹೊರಗಿದ್ದ ಮೇಲ್ಜಾತಿಗಳು) ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ಶೇ 10ರಷ್ಟು ಮೀಸಲಾತಿ ನೀಡುವಸಂವಿಧಾನ ತಿದ್ದುಪಡಿ ಮಸೂದೆಯನ್ನೂ ಲೋಕಸಭೆಯಲ್ಲಿ ಮಂಡನೆ ಮಾಡಲಾಯಿತು. ಸಾಮಾಜಿಕ ನ್ಯಾಯಮತ್ತು ಸಬಲೀಕರಣ ಸಚಿವ ತಾವರ್ಚಂದ್ ಗೆಹ್ಲೊಟ್ ಮಸೂದೆ ಮಂಡಿಸಿದರು.ಈ ಮಸೂದೆಗೆ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿತ್ತು.