ಹೈದರಾಬಾದ್: ಕರ್ನಾಟಕ ಚುನಾವಣಾ ಫಲಿತಾಂಶ ತೆಲಂಗಾಣದಲ್ಲಿ ಪುನರಾವರ್ತನೆಯಾಗಲಿದೆ ಎಂದು ಕಾಂಗ್ರೆಸ್ನ ತೆಲಂಗಾಣದ ಮುಖ್ಯಸ್ಥ ಎ.ರೇವಂತ್ ರೆಡ್ಡಿ ಶನಿವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಚುನಾವಣೆಯ ಮತ ಎಣಿಕೆ ಅಂತಿಮ ಹಂತದಲ್ಲಿದ್ದು, ಸ್ಪಷ್ಟ ಬಹುಮತದಲ್ಲಿರುವ ಕಾಂಗ್ರೆಸ್ ಗೆಲುವನ್ನು ಶ್ಲಾಘಿಸಿದ ಅವರು, ‘ಪಕ್ಷದ ಈ ಮುನ್ನಡೆ ಕೇವಲ ಕರ್ನಾಟಕಕ್ಕೇ ಸೀಮಿತವಾಗುವುದಿಲ್ಲ‘ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ರೇವಂತ್ ಮಾತನಾಡಿ, ‘ನಾಳೆ ಈ ಗೆಲುವು ತೆಲಂಗಾಣದಲ್ಲೂ ಪ್ರತಿಫಲಿಸಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಜಯ ನಮ್ಮದಾಗಲಿದೆ‘ ಎಂಬ ಭರವಸೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ 'ಭಾರತ್ ಜೋಡೋ' ಸಂದೇಶದಿಂದ ಪ್ರೇರಿತರಾದ ಕರ್ನಾಟಕದ ಜನತೆ ಬಿಜೆಪಿ ನಡೆಸುತ್ತಿರುವ ದ್ವೇಷ ರಾಜಕಾರಣವನ್ನು ತಿರಸ್ಕರಿಸಿದ್ದಾರೆ. ಈ ತೀರ್ಪು ದೇಶದ ರಾಜಕೀಯವನ್ನು ಬದಲಿಸುವ ಸುನಾಮಿ ತರಲಿದೆ‘ ಎಂದರು.
‘ಬಿಜೆಪಿಯನ್ನು ಸೋಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತದಾರರು ತಿರಸ್ಕರಿಸಿದರು ಜನತಾದಳ(ಸೆಕ್ಯುಲರ್) ಅನ್ನು ತಿರಸ್ಕರಿಸುವ ಮೂಲಕ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರನ್ನೂ ತಿರಸ್ಕರಿಸಿದಂತೆ‘ಎಂದು ರೇವಂತ್ ಕಾಂಗ್ರೆಸ್ ಕರ್ನಾಟಕದ ಗೆಲುವಿನ ಖುಷಿ ಹಂಚಿಕೊಂಡರು.