ನವದೆಹಲಿ: ಇನ್ನು ಮುಂದೆ ಮಲಯಾಳಂ ಭಾಷೆಯಲ್ಲಿ ಸಂಹವನ ಮಾಡುವಂತಿಲ್ಲ ಎಂದು ರಾಷ್ಟ್ರ ರಾಜಧಾನಿ ನವದೆಹಲಿಯ ಸರ್ಕಾರಿ ಆಸ್ಪತ್ರೆಯೊಂದರ ಕರ್ತವ್ಯ ನಿರತ ಕೇರಳ ಮೂಲದ ದಾದಿಯರಿಗೆ ಸೂಚನೆನೀಡಲಾಗಿದೆ. ಈ ಸಂಬಂಧ ಆಸ್ಪತ್ರೆ ಸುತ್ತೋಲೆಯನ್ನು ಹೊರಡಿಸಿದೆ.
ಆಸ್ಪತ್ರೆಯಲ್ಲಿ ದಾಖಲಾಗುವ ಬಹುತೇಕ ರೋಗಿಗಳಿಗೆ ಮತ್ತು ಸಹೋದ್ಯೋಗಿಗಳಿಗೆ ಈ ಭಾಷೆ ತಿಳಿದಿಲ್ಲ. ಹಾಗಾಗಿ ಮಲಯಾಳಂ ಬದಲು ಹಿಂದಿ ಹಾಗೂ ಆಂಗ್ಲ ಭಾಷೆಯಲ್ಲೇ ಸಂವಹನ ಮಾಡುವಂತೆ ಆದೇಶಿಸಲಾಗಿದೆ.
ಗೋವಿಂದ್ ವಲ್ಲಭ್ ಪಂತ್ ಇನ್ಸ್ಟಿಟ್ಯೂಟ್ ಆಫ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಜಿಐಪಿಎಂಇಆರ್) ಹೊರಡಿಸಿರುವ ಸುತ್ತೋಲೆಯಲ್ಲಿ 'ದಾದಿಯರು ಸಂವಹನಕ್ಕಾಗಿ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯನ್ನು ಮಾತ್ರ ಬಳಸುವಂತೆ ತಿಳಿಸಲಾಗಿದೆ. ಇದನ್ನು ಉಲ್ಲಂಘಿಸಿದ್ದಲ್ಲಿ ಕಠಿಣ ಕ್ರಮ ಎದುರಿಸಬೇಕಾದಿತು' ಎಂದು ಎಚ್ಚರಿಸಿದೆ.
ಜಿಐಪಿಎಂಇಆರ್ ಆಸ್ಪತ್ರೆಯಲ್ಲಿ ಕೆಲಸದ ಸಮಯದಲ್ಲಿ ಸಂವಹನಕ್ಕಾಗಿ ಮಲಯಾಳಂ ಭಾಷೆಯನ್ನೇ ಬಳಸಲಾಗುತ್ತಿದೆ ಎಂಬ ಬಗ್ಗೆ ದೂರುಗಳು ಬಂದಿವೆ. ಬಹುತೇಕ ರೋಗಿಗಳು ಹಾಗೂ ಸಹೋದ್ಯೋಗಿಗಳಿಗೆ ಈ ಭಾಷೆ ತಿಳಿದಿಲ್ಲ. ಇದರಿಂದ ಅಸಹಾಯಕರಾಗಿದ್ದು, ಬಹಳಷ್ಟು ಅನಾನುಕೂಲತೆಯಾಗುತ್ತಿದೆ ಎಂದು ಹೇಳಿದೆ.
ಏತನ್ಮಧ್ಯೆ ದೆಹಲಿ ಸರ್ಕಾರಿ ಆಸ್ಪತ್ರೆಯ ಸುತ್ತೋಲೆಯ ವಿರುದ್ಧ ಮಲಯಾಳಂ ಶುಶ್ರೂಷಕರ ಸಂಘದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ದೇಶದಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಕೇರಳ ಮೂಲದ ದಾದಿಯರು ಸೇವೆ ಸಲ್ಲಿಸುತ್ತಿದ್ದಾರೆ. ಮಲಯಾಳಂ ಅವರ ಮಾತೃಭಾಷೆ ಎಂದುಉಲ್ಲೇಖಿಸಲಾಗಿದೆ.