ಭಾನುವಾರ ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತವು ಮುಂದೆ ಸಾಗುತ್ತಿರುವಾಗ, ಹೊಸ ಸಂಸತ್ ಭವನವು ಪ್ರಪಂಚದ ಪ್ರಗತಿಗೆ ನೆರವಾಗಲಿದೆ ಎಂದು ತಿಳಿಸಿದರು.
‘ಸಂಸತ್ ಭವನವು ಆತ್ಮನಿರ್ಭರ ಭಾರತದ (ಸ್ವಾವಲಂಬಿ ಭಾರತ) ಉದಯಕ್ಕೆ ಸಾಕ್ಷಿಯಾಗಲಿದೆ. ವಿಕ್ಷಿತ್ ಭಾರತ್ (ಭಾರತದ ಅಭಿವೃದ್ಧಿ) ಕಡೆಗೆ ನಮ್ಮ ಪಯಣಕ್ಕೆ ಸಾಕ್ಷಿಯಾಗಲಿದೆ’ ಎಂದು ಮೋದಿ ಹೇಳಿದರು.
ಸಂಸತ್ ಭವನವು ಒಂದು ಕಟ್ಟಡಕ್ಕಿಂತ ಹೆಚ್ಚಾಗಿ, 1.4 ಶತಕೋಟಿ ಜನರ ಆಕಾಂಕ್ಷೆಗಳು ಮತ್ತು ಕನಸುಗಳನ್ನು ಒಳಗೊಂಡಿದೆ. ಅಲ್ಲದೆ ಇದು ಪ್ರಪಂಚಕ್ಕೆ ಭಾರತದ ಅಚಲ ನಿರ್ಣಯದ ಬಗ್ಗೆ ಪ್ರಬಲ ಸಂದೇಶವನ್ನು ತಿಳಿಸುತ್ತದೆ. ಈ ಐತಿಹಾಸಿಕ ದಿನದಂದು ಸಂಸತ್ ಭವನದಲ್ಲಿ ಸೆಂಗೋಲ್ ಅನ್ನು ಸ್ಥಾಪಿಸಲಾಗಿದೆ ಎಂದು ಮೋದಿ ಹೇಳಿದರು.
ಚೋಳ ಸಾಮ್ರಾಜ್ಯದಲ್ಲಿ ಸೆಂಗೋಲ್ ಅನ್ನು ಕರ್ತವ್ಯ, ಸೇವೆ, ಮತ್ತು ರಾಷ್ಟ್ರದ ಪ್ರತೀಕವಾಗಿ ಪರಿಗಣಿಸುತ್ತಿದ್ದರು. ಅದೇ ರೀತಿಯಲ್ಲಿ ಭಾರತದ ಪ್ರಜಾಪ್ರಭುತ್ವವು ಸೆಂಗೋಲ್ನ ಸ್ಫೂರ್ತಿಯಾಗಿದೆ. ಸಂಸತ್ತು ಈ ಸ್ಫೂರ್ತಿ ಹಾಗೂ ಸಂಕಲ್ಪಗಳ ಅತ್ಯುತ್ತಮ ಪ್ರತಿನಿಧಿಯಾಗಿದೆ. ಹೊಸ ಸಂಸತ್ ಭವನವು ಹಳೆಯ ಮತ್ತು ಹೊಸತನದ ಸಹಬಾಳ್ವೆಗೆ ಅತ್ತುತ್ಯಮ ಉದಾಹರಣೆಯಾಗಿದೆ ಎಂದು ಮೋದಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೇರಿದಂತೆ ವಿದೇಶಿ ರಾಯಭಾರಿಗಳು, ಸಂಸದರು ಪಾಲ್ಗೊಂಡಿದ್ದರು.