ಡೆಹ್ರಾಡೂನ್: ಉತ್ತಾರಖಂಡದ ಚಂಪಾವತ್ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಮದುವೆಮುಗಿಸಿಕೊಂಡು ವಾಪಸ್ ತೆರಳುತ್ತಿದ್ದಾಗ ಪಿಕಪ್ ವಾಹನ ಆಳದ ಕಣಿವೆಗೆ ಬಿದ್ದು ಇಬ್ಬರು ಮಕ್ಕಳು, ಐವರು ಮಹಿಳೆಯರು ಸೇರಿ 14 ಮಂದಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಸುಖಿಧಾಂಗ್– ದಂಡಮಿನಾರ್ ರಸ್ತೆಯ ನಡುವೆ ರಾತ್ರಿ 10 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ಬಗ್ಗೆ ಮಂಗಳವಾರ ನಸುಕಿನ 3 ಗಂಟೆ ಸುಮಾರಿಗಷ್ಟೇ ಸ್ಥಳೀಯ ಆಡಳಿತಗಳಿಗೆ ತಲುಪಿತು. ಬಳಿಕ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡಗಳು ಮೊದಲಿಗೆ 12 ಮೃತದೇಹಗಳನ್ನು ಹೊರೆ ತೆಗೆದವು ಎಂದು ಚಂಪಾವತ್ ಎಸ್ಪಿ ದೇವೇಂದ್ರ ಪಿಂಚಾ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಸಂಬಂಧಿಕರಿಗೆ ತಲಾ ₹ 2 ಲಕ್ಷ, ಗಾಯಾಳುಗಳಿಗೆ ತಲಾ ₹ 50,000 ಘೋಷಿಸಿದ್ದಾರೆ.