ಔರಂಗಬಾದ್: ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿರುವ ವಾಡಿಗೋಡ್ರಿ ಹಳ್ಳಿಯ ರೈತರು ತಾವು ಕರೆದ ಹಾಲನ್ನು ಮಂಗಳವಾರ ಸುತ್ತಮುತ್ತಲಿನ ಹಳ್ಳಿಗರಿಗೆ ಉಚಿತವಾಗಿ ವಿತರಿಸುವ ಮೂಲಕ ನೂತನ ಕೃಷಿ ಕಾಯ್ದೆಗಳ ರದ್ದುಗೊಳಿಸುವಂತೆ ಒತ್ತಾಯಿಸಿ ರೈತರು ಕರೆ ನೀಡಿರುವ ‘ಭಾರತ್ ಬಂದ್‘ಗೆ ಬೆಂಬಲ ವ್ಯಕ್ತಪಡಿಸಿದರು.
ಸ್ವಾಭಿಮಾನಿ ಶೆಟ್ಕಾರಿ ಸಂಘಟನೆಯ ಅಧ್ಯಕ್ಷ ಸುರೇಶ್ ಕಾಳೆ ಮತ್ತಿತರರು, ಮಂಗಳವಾರ ರೈತರಿಂದ ಸಂಗ್ರಹಿಸಿದ ಹಾಲನ್ನು ಸ್ವಯಂ ಸೇವಕರ ಮೂಲಕ ಸುತ್ತಮುತ್ತಲಿನ ಮಹಿಳೆಯರು ಮತ್ತು ಮಕ್ಕಳಿಗೆ ಉಚಿತವಾಗಿ ವಿತರಿಸಿದರು. ಈ ಮೂಲಕ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
‘ಬಂದ್ ಕಾರಣದಿಂದಾಗಿ ನಮ್ಮೂರಿನ ಹಾಲು ಎಲ್ಲೂ ಮಾರಾಟವಾಗುತ್ತಿರಲಿಲ್ಲ. ಹೀಗಾರಿ ರೈತರು ಹಾಲನ್ನು ನಮ್ಮ ಸ್ವಯಂ ಸೇವಕರಿಗೆ ನೀಡಿದರು. ನಾವೆಲ್ಲ ಸೇರಿ, ಹಳ್ಳಿಯ ಜನಕ್ಕೆ ಉಚಿತವಾಗಿ ವಿತರಿಸಿದೆವು‘ ಎಂದು ಕಾಳೆ ಹೇಳಿದರು.
ಹಾಲು ವಿತರಿಸಿದ ನಂತರ ಊರಿನ ಜನರೆಲ್ಲ ಸೇರಿ, ಸಂಘಟನೆಯ ನೇತೃತ್ವದಲ್ಲಿ ಅಂಬಾದ್ ತಹಶೀಲ್ದಾರ್ ಕಚೇರಿಗೆ ತೆರಳಿ ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿರುವ ಪತ್ರವನ್ನು ತಹಶೀಲ್ದಾರ್ಗೆ ಸಲ್ಲಿಸುವ ಮೂಲಕ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.