ಪ್ರಯಾಗ್ರಾಜ್:ಕುಂಭಮೇಳ ಆರಂಭದ ಮುನ್ನಾದಿನವಾದ ಸೋಮವಾರ ಪ್ರಯಾಗರಾಜ್ನಲ್ಲಿ ಭಾರಿ ಬೆಂಕಿ ಅನಾಹುತ ಸಂಭವಿಸಿದೆ.
ದಿಗಂಬರ ಅಣಿ ಅಖಾಡದ ಸಾಧುಗಳು ಉಳಿದುಕೊಂಡಿದ್ದ ತಾತ್ಕಾಲಿಕ ಟೆಂಟ್ನಲ್ಲಿ ಮಧ್ಯಾಹ್ನ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಟೆಂಟ್ಗೆ ಬೆಂಕಿ ಹತ್ತಿಕೊಂಡಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಯಾರಿಗೂ ಯಾವುದೇ ಅಪಾಯವಾಗಿಲ್ಲ. ಟೆಂಟ್ ಬಳಿ ನಿಲ್ಲಿಸಿದ್ದ ಎರಡು ವಾಹನ, ಸಾಧುಗಳ ಬಟ್ಟೆ, ಪೂಜಾ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ.
ಕುಂಭಮೇಳದಲ್ಲಿ ನಾಲ್ಕು ಸ್ವಯಂಚಾಲಿತ ಹವಾಮಾನ ಕೇಂದ್ರಗಳನ್ನು ಕೇಂದ್ರ ಸರ್ಕಾರ ಸ್ಥಾಪಿಸಿದೆ. ಮುಂದಿನ ಮೂರು ದಿನಗಳ ಹವಾಮಾನ ಮುನ್ಸೂಚನೆಯನ್ನು ಈ ಕೇಂದ್ರಗಳು ನೀಡಲಿವೆ.
ಇದಕ್ಕಾಗಿ ‘ಕುಂಭಮೇಳ ಹವಾಮಾನ ಸೇವೆ’ ಮೊಬೈಲ್ ಆ್ಯಪ್ ಕೂಡ ಅಭಿವೃದ್ಧಿಪಡಿಸಲಾಗಿದೆ.
ಇಲ್ಲಿನ ದಿಗಂಬರ್ ಅಖಾರಾ ಶಿಬಿರದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಅವಗಢದಲ್ಲಿ ಯಾರಿಗೂ ಅಪಾಯ ಉಂಟಾಗಿಲ್ಲ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಸ್ಥಳೀಯ ವರದಿಗಳ ಪ್ರಕಾರ, ಸಿಲಿಂಡರ್ ಸ್ಫೋಟದಿಂದಾಗಿ ಬೆಂಕಿ ಹರಡಿದೆ.
#WATCH Fire fighting operations underway at a camp of Digambar Akhada at #KumbhMela in Prayagraj after a cylinder blast. No loss of life or injuries reported. pic.twitter.com/qcbh8IPl5Y
— ANI UP (@ANINewsUP) January 14, 2019
ಹತ್ತು ಆಂಬ್ಯುಲೆನ್ಸ್ಗಳು ಹಾಗೂ ಒಂದು ಏರ್ ಆಂಬ್ಯುಲೆನ್ಸ್ನ್ನು ತಕ್ಷಣವೇ ಸ್ಥಳಕ್ಕೆ ಕಳುಹಿಸಲಾಗಿದೆ. ಯಾರಿಗೂ ಗಾಯಗಳಾಗಿರುವುದು ವರದಿಯಾಗಿಲ್ಲ ಎಂದು ವಿಪತ್ತು ನಿರ್ವಹಣಾ ತಂಡದ ನೋಡಲ್ ಆಫೀಸರ್ ಡಾ.ರಿಷಿ ಸಹಾಯ್ ತಿಳಿಸಿದ್ದಾರೆ.
ಪ್ರಯಾಗ್ರಾಜ್ ಅಥವಾ ಅಲಹಾಬಾದ್ನಲ್ಲಿ ಜನವರಿ 15ರಿಂದ ಪ್ರಾರಂಭವಾಗಲಿರುವ ಕುಂಭಮೇಳದಲ್ಲಿ ಸುಮಾರು 12 ಕೋಟಿ ಯಾತ್ರಾರ್ಥಿಗಳು ಭಾಗಿಯಾಗುವ ನಿರೀಕ್ಷೆಯಿದೆ. ಕುಂಭಮೇಳ ವಿಶ್ವದಲ್ಲಿಯೇ ಅತಿ ದೊಡ್ಡ ಧಾರ್ಮಿಕ ಮೇಳವಾಗಿದ್ದು, ಶಾಂತಿಯುತವಾಗಿ ನಡೆಯುವ ಯಾತ್ರೆ ಎಂದು ಯುನೆಸ್ಕೊ ವರ್ಣಿಸಿದೆ.
ಪ್ರಯಾಗ್ರಾಜ್ ಹೊರತುಪಡಿಸಿ ಹರಿದ್ವಾರ, ಉಜ್ಜಯಿನಿ ಹಾಗೂ ನಾಸಿಕ್ನಲ್ಲಿ ಕುಂಭಮೇಳದ ಆಚರಣೆ ನಡೆಯುತ್ತದೆ.
2019ರ ಈ ಕುಂಭಮೇಳಕ್ಕೆ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ₹2,800 ಕೋಟಿ ಹಂಚಿಕ ಮಾಡಿದೆ ಎಂದು ಉತ್ತರ ಪ್ರದೇಶ ಸರ್ಕಾರದ ಸಚಿವ ಸುರೇಶ್ ರಾಣಾ ತಿಳಿಸಿದ್ದಾರೆ. ಕಳೆದ ಬಾರಿಯ ಕುಂಭಮೇಳಕ್ಕಿಂತಲೂ ಹೆಚ್ಚು ವಿಸ್ತಾರ ಪ್ರದೇಶ, 3,200 ಹೆಕ್ಟೇರ್ ವಲಯದಲ್ಲಿ ಈ ಬಾರಿಯ ಮೇಳ ಆಯೋಜಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.