ಗಾಜಿಯಾಬಾದ್: ಇಲ್ಲಿನ ರಾಜನಗರ ಜಿಲ್ಲಾ ಕೇಂದ್ರದ ಮೇಲ್ಸೇತುವೆ ಬಳಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆಮಧ್ಯೆ ಕುಳಿತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮಂಗಳವಾರ ತಡರಾತ್ರಿ ನಡೆದ ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪೊಲೀಸರು ಕಾರಿನ ಚಾಲಕ ಸುರಭ್ ಶರ್ಮಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ವಿಚಾರಣೆ ವೇಳೆ ಸುರಭ್ ಶರ್ಮಾ ತಾನು ಬಿಜೆಪಿ ಅನೂಪ್ ಶಹರ್ ಶಾಸಕ ಸಂಜಯ್ ಶರ್ಮಾ ಅವರ ಪ್ರತಿನಿಧಿ ಎಂದು ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಜಯ್ ಶರ್ಮಾ ಅವರನ್ನು ಸಂಪರ್ಕಿಸಿದಾಗ, ಅವರು ತಮ್ಮ ಕ್ಷೇತ್ರದಲ್ಲಿ ಯಾವುದೇ ಪ್ರತಿನಿಧಿಯನ್ನು ನೇಮಿಸಿಲ್ಲ ಎಂದು ಹೇಳಿದ್ದಾರೆ. ಆದರೆ, ಚಾಲಕ ತನ್ನ ದೂರದ ಸಂಬಂಧಿ ಎಂದು ಒಪ್ಪಿಕೊಂಡಿದ್ದಾರೆ.
ಮಂಗಳವಾರ ತಡರಾತ್ರಿ ಮಹಗುನ್ಪುರಂ ನಿವಾಸಿ ಸುರಭ್ ಶರ್ಮಾ ಚಲಾಯಿಸುತ್ತಿದ್ದ ಕಾರು ವ್ಯಕ್ತಿಗೆ ಡಿಕ್ಕಿ ಹೊಡೆದಿದೆ. ಸ್ಥಳೀಯರು ಗಾಯಾಳುವನ್ನು ಸಂಜಯ್ ನಗರ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ, ಅವರು ಅಲ್ಲಿ ಕೊನೆಯುಸಿರುಳೆದರು ಎಂದು ಉಪ ಪೊಲೀಸ್ ಆಯುಕ್ತ (ನಗರ ವಲಯ) ನಿಪುನ್ ಅಗರ್ವಾಲ್ ತಿಳಿಸಿದ್ದಾರೆ.