ಮುಂಬೈ: ‘ದೇಶದಲ್ಲಿ ಪ್ರಜಾಪ್ರಭುತ್ವ ಸುಗಮವಾಗಿ ನಡೆಯಲು ಪತ್ರಕರ್ತರ ಸ್ವಾತಂತ್ರ್ಯವನ್ನು ಕಾಪಾಡಬೇಕಾದ ಅಗತ್ಯವಿದೆ’ ಎಂದು ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ಪ್ರತಿಪಾದಿಸಿದರು.
ಮುಂಬೈನ ಪ್ರೆಸ್ಕ್ಲಬ್ ಸ್ಥಾಪಿಸಿರುವ ‘ರೆಡ್ಇಂಕ್’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶುಕ್ರವಾರ ರಾತ್ರಿ ಅವರು ಮಾತನಾಡಿದರು.ಹಿರಿಯ ಪತ್ರಕರ್ತ ಟಿ.ಜೆ.ಎಸ್. ಜಾರ್ಜ್ ಅವರಿಗೆ ಜೀವಮಾನ ಶ್ರೇಷ್ಠ ಸಾಧನೆಗಾಗಿ ‘ರೆಡ್ಇಂಕ್’ ಪ್ರಶಸ್ತಿ ಪ್ರದಾನ ಮಾಡಲಾಯಿತು.
‘ಒಂದು ವೃತ್ತಿಯಾಗಿ ಪತ್ರಿಕೋದ್ಯಮ ಕುಂಠಿತವಾದರೆ, ಪ್ರಜಾಪ್ರಭುತ್ವವೇ ಕುಸಿಯುತ್ತದೆ’ ಎಂದ ಅವರು, ‘ಸತ್ಯ ಮಾತನಾಡಿ’ ಎಂದರು.
‘ನ್ಯಾಯಾಧೀಶರ ಮತ್ತು ಪತ್ರಕರ್ತರ ವೃತ್ತಿಗಳು ಸ್ವತಂತ್ರವಾಗಿ ಇರಬೇಕು. ಈ ವೃತ್ತಿಗಳು ಎಡವಿದರೆ ಪ್ರಜಾಪ್ರಭುತ್ವ ಕುಸಿಯುತ್ತದೆ’ ಎಂದು ಹೇಳಿದರು.
‘ಸ್ವಾತಂತ್ರ್ಯ ಕಳೆದುಕೊಂಡ ಪತ್ರಕರ್ತ ಸ್ವಾತಂತ್ರ್ಯ ಕಳೆದುಕೊಂಡ ನ್ಯಾಯಾಧೀಶನಷ್ಟೇ ಕೆಟ್ಟವರಾಗಿರುತ್ತಾರೆ’ ಎಂದರು.
‘ಪ್ರಾಮಾಣಿಕತೆಯು ಉತ್ತಮ ನೀತಿಯಾಗಿರುವ ವೃತ್ತಿಯಲ್ಲಿ ನೀವೆಲ್ಲ ಇದ್ದೀರಿ’ ಎಂಬುದನ್ನು ನೆನಪಿಡಿ ಎಂದು ಅವರು ಪತ್ರಕರ್ತರಿಗೆ ತಿಳಿಸಿದರು.
‘ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಇದ್ದರೆ, ಈ ಮೂರೂ ಅಂಗಗಳನ್ನು ತರಾಟೆಗೆ ತೆಗೆದುಕೊಳ್ಳುವ ನಾಲ್ಕನೇ ಅಂಗವೇ ಪತ್ರಿಕಾ ರಂಗ’ ಎಂದು ಅವರು ಹೇಳಿದರು.