ನವದೆಹಲಿ (ಪಿಟಿಐ): ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಮೇಲೆ 2005ರಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ನಾಲ್ವರು ಅಪರಾಧಿಗಳಿಗೆ ನೀಡಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೊರ್ಟ್ ಸೋಮವಾರ ಎತ್ತಿ ಹಿಡಿದಿದೆ.
ಕರ್ನಾಟಕ ಹೈಕೋರ್ಟ್ 2016ರಲ್ಲಿ ತಮಗೆ ಜೀವಾವಧಿ ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ ನಾಲ್ವರು ಆರೋಪಿಗಳಾದ ಮೊಹ ಮ್ಮದ್ ಇರ್ಫಾನ್, ನಿಜಾಮುದ್ದೀನ್, ಮೊಹಮ್ಮದ್ ಇರ್ಫಾನ್ ಮತ್ತು ನೂರುಲ್ಲಾ ಖಾನ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಈ ನಾಲ್ವರು ಸಾರ್ವಜನಿಕರು ಮತ್ತು ಸಾರ್ವಜನಿಕ ಆಸ್ತಿಗೆ ಅಪಾಯ ತರುವ ನಿಟ್ಟಿನಲ್ಲಿ ಪಿತೂರಿ ನಡೆಸಿದ್ದು, ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಯು.ಯು.ಲಲಿತ್, ಹೇಮಂತ್ಗುಪ್ತ, ಎಸ್.ರವೀಂದ್ರ ಭಟ್ ಅವರಿದ್ದ ಪೀಠ, ಅರ್ಜಿಯನ್ನು ವಜಾಮಾಡಿತು.
2005ರ ಡಿಸೆಂಬರ್ 28ರಂದು ಸಂಜೆ 7 ಗಂಟೆ ಸುಮಾರಿಗೆ ಐಐಎಸ್ಸಿ ಕ್ಯಾಂಪಸ್ಗೆ ನುಗ್ಗಿದ್ದ ಇಬ್ಬರು ಬಂದೂಕುಧಾರಿಗಳು ಗುಂಡು ಹಾರಿಸಿದ್ದರಿಂದ ದೆಹಲಿ ಐಐಟಿ ಪ್ರೊಫೆಸರ್ ಒಬ್ಬರು ಮೃತಪಟ್ಟಿದ್ದರು.