ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಮರಾವತಿ ಸಂಸದೆ: ಜಾತಿ ಪ್ರಮಾಣಪತ್ರ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ ಕೋರ್ಟ್‌

Published 4 ಏಪ್ರಿಲ್ 2024, 15:44 IST
Last Updated 4 ಏಪ್ರಿಲ್ 2024, 15:44 IST
ಅಕ್ಷರ ಗಾತ್ರ

ನವದೆಹಲಿ: ಮಹಾರಾಷ್ಟ್ರದ ಅಮರಾವತಿಯ ಹಾಲಿ ಸಂಸದೆ ನವನೀತ್‌ ಕೌರ್‌ ರಾಣಾ ಅವರ ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸಿದ್ದ ಹೈಕೋರ್ಟ್‌ ತೀರ್ಪನ್ನು ಗುರುವಾರ ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್‌, ನವನೀತ್‌ ಅವರ ಜಾತಿ ಪ್ರಮಾಣಪತ್ರದ ಸಿಂಧುತ್ವವನ್ನು ಎತ್ತಿಹಿಡಿದೆ.

ಎಸ್‌ಸಿಗೆ ಮೀಸಲಿರುವ ಅಮರಾವತಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ನವನೀತ್‌ ಅವರಿಗೆ, ನಾಮಪತ್ರ ಸಲ್ಲಿಕೆಗೂ ಮುನ್ನ ಈ ತೀರ್ಪು ಬಂದಿರುವುದು ನಿಟ್ಟುಸಿರು ಬಿಡುವಂತೆ ಮಾಡಿದೆ.

ನವನೀತ್‌ ಅವರು ‘ಮೋಚಿ’ ಜಾತಿಗೆ ಸೇರಿದವರು ಎಂದು ಜಿಲ್ಲಾಧಿಕಾರಿ 2013ರ ಆಗಸ್ಟ್‌ 30ರಂದು ನೀಡಿದ್ದ ಜಾತಿ ಪ್ರಮಾಣಪತ್ರವನ್ನು, ಬಾಂಬೆ ಹೈಕೋರ್ಟ್‌ 2021ರಲ್ಲಿ ರದ್ದುಗೊಳಿಸಿತ್ತು.

ಈ ಸಂಬಂಧ ಆರಂಭದಲ್ಲಿ ಶಿವಸೇನಾ ಮುಖಂಡ ಆನಂದರಾವ್‌ ಆಡ್ಸುಲ್‌ ಅವರು ಮುಂಬೈ ಜಿಲ್ಲಾ ಜಾತಿ ಪ್ರಮಾಣಪತ್ರ ಪರಿಶೀಲನಾ ಸಮಿತಿಗೆ ದೂರು ನೀಡಿದ್ದರು. ಅದನ್ನು ಪರಿಶೀಲಿಸಿದದ ಸಮಿತಿಯು ಜಾತಿ ಪ್ರಮಾಣ ಪತ್ರವನ್ನು ಮಾನ್ಯ ಮಾಡಿತ್ತು. ಅದನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ನವನೀತ್‌ ಅವರು ತನ್ನ ಪತಿ, ಶಾಸಕ ರವಿ ಅವರ ಪ್ರಭಾವ ಬಳಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ವಾದಿಸಿದ್ದರು. 

ದಾಖಲೆಗಳು ಅವರು ‘ಸಿಖ್‌–ಚಾಮರ್‌’ ಜಾತಿಗೆ ಸೇರಿದವರು ಎಂದು ಸೂಚಿಸಿವೆ ಎಂದು 2021ರ ಜೂನ್‌ 8ರಂದು ಹೇಳಿದ್ದ ಹೈಕೋರ್ಟ್‌, ಅಮರಾವತಿ ಸಂಸದರಿಗೆ ₹ 2 ಲಕ್ಷ ದಂಡ ವಿಧಿಸಿ, ಆರು ವಾರಗಳಲ್ಲಿ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸಿ ತೀರ್ಪು ನೀಡಿತ್ತು. 

ಇದನ್ನು ಪ್ರಶ್ನಿಸಿ ನವನೀತ್‌ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ.ಕೆ.ಮಹೇಶ್ವರಿ ಮತ್ತು ಸಂಜಯ್‌ ಕರೋಲ್‌ ಅವರ ಪೀಠವು, ಜಾತಿ ಪ್ರಮಾಣಪತ್ರದ ಮೇಲಿನ ಪರಿಶೀಲನಾ ಸಮಿತಿಯ ವರದಿಯಲ್ಲಿ ಹೈಕೋರ್ಟ್‌ ಮಧ್ಯ ಪ್ರವೇಶಿಸಬಾರದು ಎಂದು ಹೇಳಿತು. ಅಲ್ಲದೆ ನವನೀತ್‌ ಅವರಿಗೆ ನೀಡಲಾಗಿದ್ದ ಜಾತಿ ಪ್ರಮಾಣಪತ್ರದ ಸಿಂಧುತ್ವವನ್ನು ಎತ್ತಿಹಿಡಿಯಿತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT