ವಿಶ್ವಸಂಸ್ಥೆ: ತಮ್ಮ ಮೊದಲ ಭಾಷಣದಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಿಸಿದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ನೂತನ ಹೈಕಮಿಷನರ್ ಮಿಶೆಲ್ ಬ್ಯಾಚೆಲೆಟ್ ವಿರುದ್ಧ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
’ಮಾನವ ಹಕ್ಕುಗಳ ಮಂಡಳಿಯ ಇತ್ತೀಚಿನ ವರದಿಯನ್ನು ಭಾರತ ಅರ್ಥಪೂರ್ಣವಾಗಿ ಪಾಲಿಸಿಲ್ಲ. ಅಥವಾ ಗಂಭೀರ ಸಮಸ್ಯೆಯನ್ನು ಇತ್ಯರ್ಥಪಡಿಸುವ ಮಾರ್ಗಗಳ ಬಗ್ಗೆ ಚರ್ಚೆಯೂ ನಡೆದಿಲ್ಲ’ ಎಂದು ಮಿಶೆಲ್ ಹೇಳಿದ್ದರು.
ಮಿಶೆಲ್ ಮಾತಿಗೆ ವಿಷಾದ ವ್ಯಕ್ತಪಡಿಸಿರುವಜಿನೀವಾದಲ್ಲಿ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರಾಜೀವ್ ಚಾಂದರ್, ‘ವಿಶ್ವಸಂಸ್ಥೆಯ ಮನವ ಹಕ್ಕುಗಳ ಮಂಡಳಿಯಲ್ಲಿ (ಯುಎನ್ಎಚ್ಆರ್ಸಿ) ಭಾರತವು ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿದೆ’ ಎಂದಿದ್ದಾರೆ.
‘ಜಮ್ಮು–ಕಾಶ್ಮೀರದಲ್ಲಿ ಮಾನವ ಹಕ್ಕು ಸಂಬಂಧಿ ವಿಷಯಗಳನ್ನು ರಚನಾತ್ಮಕವಾಗಿ, ಭಾರತದ ಸಾರ್ವಭೌಮತೆಗೆ ಅನುಗುಣವಾಗಿ ಮತ್ತು ಪ್ರಾದೇಶಿಕ ಸಮುಗ್ರತೆ ಹಿತದೃಷ್ಟಿಯಿಂದ, ಪಾರದರ್ಶಕ, ವಿಶ್ವಾಸಾರ್ಹ ರೀತಿಯಲ್ಲಿ ನಿಭಾಯಿಸಲಾಗಿದೆ’ ಎಂದು ರಾಜೀವ್ ಸ್ಪಷ್ಟಪಡಿಸಿದ್ದಾರೆ.
ಜಿನೀವಾದಲ್ಲಿ ನಡೆದ 38ನೇ ಮಂಡಳಿಯು ಸಭೆಯಲ್ಲಿ ಮಾತನಾಡಿದ ಅವರು, ‘ಭಯೋತ್ಪಾದನೆ ಎಂಬುದು ಅತಿದೊಡ್ಡ ಶತ್ರು. ಇದು ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ನೀವು ಈ ಬಗ್ಗೆ ಗಮನಹರಿಸುತ್ತೀರೆಂಬ ವಿಶ್ವಾಸವಿದೆ’ ಎಂದು ಮಿಶೆಲ್ ಅವರಿಗೆ ನಯವಾಗಿ ತಿರುಗೇಟು ನೀಡಿದ್ದಾರೆ.