ನವದೆಹಲಿ: ದೇಶದಲ್ಲಿ ಇಲ್ಲಿಯವರೆಗೆ ಕೋವಿಡ್–19ರ ಜೆಎನ್.1 ಉಪತಳಿಯ 21 ಪ್ರಕರಣಗಳು ಮೂರು ರಾಜ್ಯಗಳಲ್ಲಿ ಪತ್ತೆಯಾಗಿದ್ದು, ಭಯಪಡುವ ಅಗತ್ಯವಿಲ್ಲ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿ.ಕೆ.ಪೌಲ್ ಬುಧವಾರ ಹೇಳಿದ್ದಾರೆ.
ಗೋವಾದಲ್ಲಿ 19 ಜನರಲ್ಲಿ, ಕೇರಳ ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಬ್ಬರಲ್ಲಿ ಜೆಎನ್.1 ಉಪತಳಿ ಪತ್ತೆಯಾಗಿದೆ. ಎರಡು ವಾರದಿಂದ ಕೋವಿಡ್–19ಕ್ಕೆ ದೇಶದಲ್ಲಿ 16 ಜನರು ಮೃತಪಟ್ಟಿದ್ದಾರೆ.
ಹೊಸ ರೂಪಾಂತರ ತಳಿಯ ಕುರಿತು ಭಾರತೀಯ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ ಎಂದ ಅವರು, ರಾಜ್ಯಗಳು ಕೋವಿಡ್ ಪತ್ತೆ ಪರೀಕ್ಷೆಗಳನ್ನು ಹೆಚ್ಚಿಸುವ ಮತ್ತು ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸಚಿವರ ಪರಿಶೀಲನೆ: ದೇಶದ ಆರೋಗ್ಯ ಸೌಲಭ್ಯಗಳ ಸನ್ನದ್ಧತೆಯ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಬುಧವಾರ ಪರಿಶೀಲನೆ ನಡೆಸಿದರು. ಅಲ್ಲದೆ ಕೋವಿಡ್ನ ಹೊಸ ತಳಿಗಳ ಕುರಿತು ಎಚ್ಚರಿಕೆ ಮತ್ತು ನಿಗಾ ವಹಿಸಲು ಅವರು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳಿಗೆ ಸೂಚಿಸಿದರು.