ನವದೆಹಲಿ: ‘ಜೈಲಿನಿಂದ ಸರ್ಕಾರ ಮುನ್ನೆಡಸಲು ಸಾಧ್ಯವಿಲ್ಲ’ ಎಂಬ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಹೇಳಿಕೆಗೆ ಪ್ರತಿಕ್ರಿಯಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ‘ಇದೊಂದು ರಾಜಕೀಯ ಪಿತೂರಿ’ ಎಂದು ಹೇಳಿದ್ದಾರೆ.
ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಕೇಜ್ರಿವಾಲ್, ‘ಇದಕ್ಕೆಲ್ಲ ಜನರೇ ತಕ್ಕ ಉತ್ತರ ನೀಡಲಿದ್ದಾರೆ’ ಎಂದರು.
ಕೇಜ್ರಿವಾಲ್ ರಾಜೀನಾಮೆಯನ್ನು ತಳ್ಳಿಹಾಕಿರುವ ಎಎಪಿ ನಾಯಕರು, ಕಾರ್ಯಕರ್ತರು, ‘ಕೇಜ್ರಿವಾಲ್ ಅವರು ಜೈಲಿನಿಂದಲೇ ಸರ್ಕಾರವನ್ನು ಮುನ್ನೆಡಸುತ್ತಾರೆ’ ಎಂದು ಒತ್ತಿ ಹೇಳಿದ್ದರು.
ಬುಧವಾರ ಟೈಮ್ಸ್ ನೌ ಖಾಸಗಿ ಸುದ್ದಿವಾಹಿನಿ ನಡೆಸಿದ ಶೃಂಗಸಭೆಯಲ್ಲಿ ಮಾತನಾಡಿದ ಸಕ್ಸೇನಾ, ದೆಹಲಿ ಸರ್ಕಾರವನ್ನು ಜೈಲಿನಿಂದ ಮುನ್ನೆಡಸಲು ಸಾಧ್ಯವಿಲ್ಲ ಎಂದಿದ್ದರು.
ಅಬಕಾರಿ ನೀತಿ ಹಗರಣ ಪ್ರಕರಣ ಸಂಬಂಧ ಮಾರ್ಚ್ 21ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನವಾಗಿದ್ದು, ಮಾರ್ಚ್ 28ರವರೆಗೆ ಇ.ಡಿ ಕಸ್ಟಡಿಗೆ ಒಪ್ಪಿಸಿ ದೆಹಲಿ ನ್ಯಾಯಾಲಯ ಆದೇಶ ಹೊರಡಿಸಿತ್ತು.