ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲತಾ ಅವರ ಸಾವಿನ ಕಾರಣ ಕುರಿತು ತನಿಖೆಗೆ ನೇಮಿಸಲಾಗಿದ್ದ ನ್ಯಾಯಮೂರ್ತಿ ಎ.ಆರ್ಮುಗಸ್ವಾಮಿ ಆಯೋಗ, ಶನಿವಾರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸೋಮವಾರ ನಡೆಯುವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರುವ ನಿರೀಕ್ಷೆಯಿದೆ.
ಆಯೋಗವು 150 ಸಾಕ್ಷಿದಾರರ ಹೇಳಿಕೆಗಳನ್ನು ದಾಖಲಿಸಿದೆ.ನ್ಯಾಯಮೂರ್ತಿ ಆರ್ಮುಗಸ್ವಾಮಿ ನೇತೃತ್ವದ ಆಯೋಗವನ್ನು ಹಿಂದಿನ ಎಐಎಡಿಎಂಕೆ ಸರ್ಕಾರ ರಚಿಸಿತ್ತು. ಆಯೋಗವು ನವೆಂಬರ್ 22, 2017ರಂದು ತನಿಖೆ ಆರಂಭಿಸಿತ್ತು.
‘ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಆಯೋಗವು ವರದಿಯನ್ನು ಸಲ್ಲಿಸಿದೆ. ಮುಂದಿನ ಕ್ರಮಕ್ಕಾಗಿ ವರದಿಯನ್ನು ಸಂಪುಟದ ಮುಂದಿಡುವಂತೆ ಮುಖ್ಯಮಂತ್ರಿ ಅವರು ಸೂಚಿಸಿದ್ದಾರೆ’ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
2021ರ ಚುನಾವಣೆಗೂ ಮೊದಲು ಡಿಎಂಕೆ ಪಕ್ಷವು, ಜಯಲಲಿತಾ ಸಾವಿಗೆ ಕಾರಣವಾದ ಅಂಶಗಳ ಕುರಿತಂತೆ ಸಮಗ್ರ ತನಿಖೆ ನಡೆಸಲಾಗುವುದು. ತಪ್ಪಿತಸ್ಥರು ಎಂದು ಕಂಡುಬರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿತ್ತು.
ಜಯಲಲಿತಾ ಅವರ ಆರೋಗ್ಯ ಸ್ಥಿತಿ, ಅಪೊಲೊ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ ಸಂದರ್ಭ, 75 ದಿನದ ಆಸ್ಪತ್ರೆಯ ಅವಧಿಯಲ್ಲಿ ನೀಡಲಾದ ಚಿಕಿತ್ಸೆ ಕುರಿತ ಅಂಶಗಳನ್ನು ಆಧರಿಸಿ ಆಯೋಗವು ತನಿಖೆ ನಡೆಸಿದೆ. ‘ವರದಿಯಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಲಾಗಿದೆ’ ಎಂದು ನ್ಯಾಯಮೂರ್ತಿ ಆರ್ಮುಗಸ್ವಾಮಿ ಹೇಳಿದರು.