ಡೆಹ್ರಾಡೂನ್: ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾದ ಪರಿಣಾಮ ಕಾರಿನಲ್ಲಿದ್ದ ಐದು ಮಂದಿ ಯಾತ್ರಾರ್ಥಿಗಳು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಗುಪ್ತಕಾಶಿ-ಗೌರಿಕುಂಡ್ ಹೆದ್ದಾರಿಯ ತರ್ಸಾಲಿ ಎಂಬಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇದರನಾಥಕ್ಕೆ ಹೊರಡುವ ಮಾರ್ಗ ಮಧ್ಯದಲ್ಲಿ ಈ ದುರಂತ ಸಂಭವಿಸಿದೆ.
ಕಾರೊಂದು ನಾಪತ್ತೆಯಾಗಿರುವ ಬಗ್ಗೆ ಗುರುವಾರ ತಡರಾತ್ರಿ ಮಾಹಿತಿ ಬಂದಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಶುಕ್ರವಾರದಂದು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿ, ಭೂಕುಸಿತದ ಅವಶೇಷಗಳಡಿ ಸಿಲುಕಿ ಹಾಕಿಕೊಂಡಿದ್ದ ಸ್ವಿಫ್ಟ್ ಡಿಜೈರ್ ಕಾರು ಹಾಗೂ ಮೃತದೇಹವನ್ನು ಹೊರ ತೆಗೆಯಲಾಯಿತು ಎಂದು ರುದ್ರಪ್ರಯಾಗ ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ನಂದನ್ ಸಿಂಗ್ ರಾಜ್ವಾರ್ ತಿಳಿಸಿದ್ದಾರೆ.
ಭೂಕುಸಿತದ ಪರಿಣಾಮ ಗುಪ್ತಕಾಶಿ-ಗೌರಿಕುಂಡ್ ಹೆದ್ದಾರಿಯ 60 ಕಿ.ಮೀ ಉದ್ದದ ರಸ್ತೆ ಮಾರ್ಗ ಕಡಿತಗೊಂಡಿದೆ. ಫಟಾ ಮತ್ತು ಸೋನ್ಪ್ರಯಾಗ್ ನಡುವೆ ರಸ್ತೆ ಸಂಚಾರವೂ ಸ್ಥಗಿತಗೊಂಡಿದೆ.
ಮೃತರನ್ನು ಗುಜರಾತ್ ಮೂಲದವರು ಎಂದು ಗುರುತಿಸಲಾಗಿದೆ.