ಕೊಚ್ಚಿ:ವೈದ್ಯರ ಸಲಹಾ ಚೀಟಿ ಆಧರಿಸಿ ಮನೆಬಾಗಿಲಿಗೆ ಮದ್ಯವನ್ನು ತಲುಪಿಸುವ ಕೇರಳ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ.
‘ಸರ್ಕಾರದ ಈ ನಿರ್ಧಾರ ದೊಡ್ಡ ದುರಂತವೊಂದಕ್ಕೆ ಮುನ್ನುಡಿ ಬರೆಯಲಿದೆ. ಇದು ಆತಂಕಕಾರಿ ವಿಷಯ’ ಎಂದು ಹೇಳಿದ ನ್ಯಾಯಾಲಯ, ಮದ್ಯ ಸೇವನೆಗೆ ಅವಕಾಶ ನೀಡುವುದರಿಂದ ಸೋಂಕು ಮಾಯವಾಗುತ್ತದೆ ಎಂಬುದನ್ನು ಸಾಬೀತು ಪಡಿಸಲು ಸರ್ಕಾರ ಪ್ರಯತ್ನಿಸುತ್ತಿದೆಯೇ’ ಎಂದು ಪ್ರಶ್ನಿಸಿದೆ.
ಮೂರು ವಾರಗಳವರೆಗೆ ಸರ್ಕಾರದ ಆದೇಶಕ್ಕೆ ತಡೆ ನೀಡಲಾಗಿದ್ದು, ವಾರದೊಳಗೆ ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಸರ್ಕಾರಕ್ಕೆ ನ್ಯಾಯಪೀಠ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಎ.ಕೆ. ಜಯಶಂಕರನ್ ನಂಬಿಯಾರ್ ಮತ್ತು ಶಾಜಿ ಪಿ. ಚಾಲಿ ಅವರಿದ್ದ ಪೀಠ ಪ್ರಕರಣದ ವಿಚಾರಣೆ ನಡೆಸಿತು.
ಸರ್ಕಾರದ ನಿರ್ಧಾರದ ವಿರುದ್ಧ ಕೇರಳ ಸರ್ಕಾರಿ ವೈದ್ಯಕೀಯ ಅಧಿಕಾರಿಗಳ ಸಂಘ (ಕೆಜಿಎಂಒಎ) ಸೇರಿದಂತೆವೈದ್ಯರು ಮತ್ತು ಮದ್ಯ ನಿಷೇಧ ಬೆಂಬಲಿತ ಕಾರ್ಯಕರ್ತರು ನ್ಯಾಯಾಲಯದ ಮೆಟ್ಟಿಲೇರಿದ್ದರು.