ಪ್ರಯಾಗ್ರಾಜ್: ಕುಂಭ ಮೇಳದ ಪ್ರಮುಖ ಆಕರ್ಷಣೆ ಮತ್ತು ಮಹತ್ವ ಪಡೆದಿರುವ ‘ಶಾಹಿ ಸ್ನಾನ’ಕ್ಕೆ ಇಲ್ಲಿನ ಸಂಗಮ ನಗರ ಸಜ್ಜುಗೊಂಡಿದ್ದು, ಭಾನುವಾರ ಸುಮಾರು ಎರಡು ಕೋಟಿ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.
‘ವಸಂತ ಪಂಚಮಿ’ ಅಂಗವಾಗಿ ದೇಶ–ವಿದೇಶಗಳ ಭಕ್ತಾದಿಗಳು ಸಂಗಮದಲ್ಲಿ ಸಾಗರೋಪಾದಿಯಲ್ಲಿ ಸೇರುವ ನಿರೀಕ್ಷೆ ಇದೆ. ಕುಂಭ ಮೇಳದಲ್ಲಿ ಇದು ಮೂರನೇ ‘ಶಾಹಿ ಸ್ನಾನ’ವಾಗಿದೆ.
‘ಕುಂಭಮೇಳದಲ್ಲಿ ಮೂರು ಶಾಹಿ ಸ್ನಾನಗಳು ಮತ್ತು ಮೂರು ಪರ್ವ ಸ್ನಾನಗಳು ಮಹತ್ವ ಪಡೆದಿವೆ’ ಎಂದು ಅಖಿಲ ಭಾರತೀಯ ಅಖಾಡ ಪರಿಷತ್ (ಎಬಿಎಪಿ) ಅಧ್ಯಕ್ಷ ನರೇಂದ್ರ ಗಿರಿ ತಿಳಿಸಿದ್ದಾರೆ.
ವಸಂತ ಪಂಚಮಿಗೆ ಮುನ್ನ ಮಕರ ಸಂಕ್ರಾಂತಿ ಮತ್ತು ಮೌನಿ ಅಮಾವಾಸ್ಯೆ ದಿನಗಳಂದು ಶಾಹಿ ಸ್ನಾನಗಳು ನಡೆಯುತ್ತವೆ.
‘ಕುಂಭದ ಕೊನೆಯ ಶಾಹಿ ಸ್ನಾನ ವಸಂತ ಪಂಚಮಿಯ ದಿನದಂದು ನಡೆಯುತ್ತದೆ. ಈ ದಿನದಂದು ಸ್ನಾನ ಮಾಡುವ ಮೂಲಕ ಭಕ್ತಾದಿಗಳು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಆಶೀರ್ವಾದ ಪಡೆಯುತ್ತಾರೆ. ಹೀಗಾಗಿ, ಅಪಾರ ಮಹತ್ವ ಪಡೆದಿದೆ’ ಎಂದು ಇಲ್ಲಿನ ಮೇಯರ್ ಅಭಿಲಾಷಾ ಗುಪ್ತಾ ತಿಳಿಸಿದ್ದಾರೆ.
ಮಕರ ಸಂಕ್ರಾಂತಿಯ ದಿನವಾದ ಜನವರಿ 15ರಂದು ಮೇಳ ಆರಂಭವಾಗಿದ್ದು, ಮಹಾಶಿವರಾತ್ರಿ ದಿನವಾದ ಮಾರ್ಚ್ 4ರಂದು ಕುಂಭ ಮೇಳ ಮುಕ್ತಾಯವಾಗಲಿದೆ.
3,200 ಹೆಕ್ಟೇರ್ ಪ್ರದೇಶದಲ್ಲಿ ಆವರಿಸಿಕೊಂಡಿರುವ ಕುಂಭಮೇಳದಲ್ಲಿ ಉತ್ತರ ಪ್ರದೇಶ ಪೊಲೀಸರು ಮತ್ತು ಕೇಂದ್ರೀಯ ಅರೆಸೇನಾ ಪಡೆಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
***
ವಸಂತ ಪಂಚಮಿ ದಿನದಂದು ಸ್ನಾನ ಮಾಡುವ ಮೂಲಕ ಭಕ್ತಾದಿಗಳು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಆಶೀರ್ವಾದ ಪಡೆಯುತ್ತಾರೆ.