ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lunar Eclipse 2023 | ಇಂದು ಚಂದ್ರ ಗ್ರಹಣ: ಭಾರತದ ಎಲ್ಲೆಲ್ಲಿ ವೀಕ್ಷಣೆ ಸಾಧ್ಯ?

Published 28 ಅಕ್ಟೋಬರ್ 2023, 6:32 IST
Last Updated 28 ಅಕ್ಟೋಬರ್ 2023, 6:32 IST
ಅಕ್ಷರ ಗಾತ್ರ

ಕೋಲ್ಕತ್ತ: ಯುರೋಪ್, ಆಫ್ರಿಕಾ, ರಷ್ಯಾ ಮತ್ತು ಭಾರತದ ಹಲವೆಡೆ ಇಂದು ರಾತ್ರಿ ಭಾಗಶಃ ಚಂದ್ರಗ್ರಹಣ ಗೋಚರಿಸಲಿದೆ.

ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಇತರ ಭಾಗಗಳಲ್ಲಿ ಗ್ರಹಣ ಗೋಚರಿಸಲಿದೆ ಎಂದು ವರದಿಯಾಗಿದೆ.

‘ಅಕ್ಟೋಬರ್ 28ರಂದು ರಾತ್ರಿ 11.31ಕ್ಕೆ ಗ್ರಹಣ ಆರಂಭವಾಗಲಿದ್ದು, ಅ.29ರ ಮುಂಜಾನೆ 1.05ಕ್ಕೆ ಗ್ರಹಣ ಸಂಭವಿಸುತ್ತದೆ. ಗ್ರಹಣವು 1.44ಕ್ಕೆ ಗರಿಷ್ಠ ಮಟ್ಟದಲ್ಲಿ ಇರಲಿದ್ದು, 2.23ಕ್ಕೆ ಗ್ರಹಣ ಕೊನೆಗೊಳ್ಳುತ್ತದೆ’ ಎಂದು ಖಗೋಳ ಭೌತಶಾಸ್ತ್ರಜ್ಞ ದೇವಿ ಪ್ರಸಾದ್‌ ದುವಾರಿ ತಿಳಿಸಿದ್ದಾರೆ.

ಪಿಲಿಕುಳದಲ್ಲಿ ಚಂದ್ರಗ್ರಹಣ ವೀಕ್ಷಣೆ

ಮಂಗಳೂರು: ಇಂದು ರಾತ್ರಿ 1.05 ಗಂಟೆಯಿಂದ 2.20 ಗಂಟೆಯವರೆಗೆ ಸಂಭವಿಸುವ ಭಾಗಶಃ ಚಂದ್ರ ಗ್ರಹಣ ವೀಕ್ಷಣೆಗೆ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸಂಜೆ 7.30ರಿಂದ ಆಕಾಶ ವೀಕ್ಷಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ದೂರದರ್ಶಕದ ಮೂಲಕ ಗುರು ಗ್ರಹ, ಶನಿ ಗ್ರಹ ಮತ್ತು ಚಂದ್ರನನ್ನು ಕಣ್ತುಂಬಿಕೊಳ್ಳಬಹುದು. ಇದೇ ಸಮಯದಲ್ಲಿ ಕಾಣಸಿಗುವ ನಕ್ಷತ್ರಗಳು ಮತ್ತು ನಕ್ಷತ್ರ ಪುಂಜಗಳನ್ನು ಗುರುತಿಸುವುದು, ಗ್ರಹಣಗಳ ಬಗ್ಗೆ ಕೇಂದ್ರದ ಸಿಬ್ಬಂದಿ ಮಾಹಿತಿ ನೀಡಲಿದ್ದಾರೆ. ಬರಿಗಣ್ಣಿನಿಂದಲೂ ಗ್ರಹಣವನ್ನು ವೀಕ್ಷಿಸಬಹುದು. ವಿಶೇಷ ಮುಂಜಾಗ್ರತೆ ಅಗತ್ಯವಿಲ್ಲ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರು ತಿಳಿಸಿದ್ದಾರೆ.

ಕುಕ್ಕೆ: ದೇವರ ದರ್ಶನ ಸಮಯದಲ್ಲಿ ಬದಲಾವಣೆ

ಸುಬ್ರಹ್ಮಣ್ಯ: ಚಂದ್ರ ಗ್ರಹಣದ ಕಾರಣ ಇಂದು (ಶನಿವಾರ) ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

ಇಂದು ರಾತ್ರಿಯ ಮಹಾಪೂಜೆಯು ಸಂಜೆ 6.30ಕ್ಕೆ ನಡೆಯಲಿದ್ದ ಆನಂತರ ದೇವರ ದರ್ಶನ ಇರುವುದಿಲ್ಲ. ಸಂಜೆ ಆಶ್ಲೇಷ ಬಲಿ ಸೇವೆ ಹಾಗೂ ರಾತ್ರಿ ಪ್ರಸಾದ ಭೋಜನ ಇರುವುದಿಲ್ಲ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.

ಇಂದು ಸತ್ಯನಾರಾಯಣ ಪೂಜಾ ಕಾರ್ಯ ಇಲ್ಲ

ಮಡಿಕೇರಿ: ಇಂದು ಖಂಡಗ್ರಾಸ ಚಂದ್ರ ಗ್ರಹಣ ಇರುವುದರಿಂದ ಭಗಂಡೇಶ್ವರ ದೇವಾಲಯದಲ್ಲಿ ಸಂಜೆ 6.30ಕ್ಕೆ ಮಹಾಪೂಜೆ ನಡೆಯಲಿದ್ದು, ನಂತರ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ.

ಮಾಸಿಕವಾಗಿ ಹುಣ್ಣಿಮೆಯಂದು ನಡೆಸಲಾಗುತ್ತಿದ್ದ ‘ಸಾಮೂಹಿಕ ಸತ್ಯನಾರಾಯಣ’ ಪೂಜಾ ಕಾರ್ಯವೂ ಇರುವುದಿಲ್ಲ ಎಂದು ಭಗಂಡೇಶ್ವರ-ತಲಕಾವೇರಿ, ಸಮೂಹ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿ ಎನ್.ಜಿ.ಚಂದ್ರಶೇಖರ್ ತಿಳಿಸಿದ್ದಾರೆ.

ಚಂದ್ರಗ್ರಹಣ: ಮಹಾಬಲೇಶ್ವರನ ಸ್ಪರ್ಶ ದರ್ಶನಕ್ಕೆ ಅವಕಾಶ

ಗೋಕರ್ಣ: ಇಂದು ಮಧ್ಯರಾತ್ರಿ ನಡೆಯುವ ಚಂದ್ರ ಗ್ರಹಣದ ಅವಧಿಯಲ್ಲಿ ಪುರಾಣ ಪ್ರಸಿದ್ಧ ಗೋಕರ್ಣ ಮಹಾಬಲೇಶ್ವರನ ಆತ್ಮಲಿಂಗದ ದರ್ಶನಕ್ಕೆ ಅವಕಾಶ ಲಭ್ಯವಿದ್ದು, ಭಕ್ತರು ಮಹಾಬಲೇಶ್ವರನ ಸ್ಪರ್ಶ ದರ್ಶನ ಪಡೆಯಬಹುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಇಂದು ರಾತ್ರಿ 1 ಗಂಟೆಯಿಂದ ಚಂದ್ರಗ್ರಹಣ ಮುಗಿಯುವ ರಾತ್ರಿ 2.30ರ ವರೆಗೆ ದೇವಸ್ಥಾನ ತೆಗೆದಿರಲಿದ್ದು, ಭಕ್ತರಿಗೆ ದರ್ಶನಕ್ಕೆ ಅವಕಾಶವಿದೆ. ಆದರೆ ಇಂದು ಸಂಜೆ 4 ರಿಂದ 5.30 ರವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಶವಿರಲಿದ್ದು, ಸಂಜೆ 5.30ರ ನಂತರ ದೇವಸ್ಥಾನದ ಬಾಗಿಲು ಮುಚ್ಚಿರುತ್ತದೆ. ರಾತ್ರಿ ಅಮೃತಾನ್ನ ಪ್ರಸಾದ ಭೋಜನ ಇರುವುದಿಲ್ಲ. ಮಧ್ಯರಾತ್ರಿ 1ಕ್ಕೆ ದೇವಾಲಯ ತೆರೆಯಲಿದೆ.

ಚಂದ್ರ ಗ್ರಹಣ: ಸಿಗಂದೂರು ಪೂಜಾ ಸಮಯದಲ್ಲಿ ಬದಲಾವಣೆ ಇಲ್ಲ

ತುಮರಿ: ನಾಡಿನೆಲ್ಲೆಡೆ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ತಾಲ್ಲೂಕಿನ ಸಿಗಂದೂರು ಚೌಡಮ್ಮ ದೇವಸ್ಥಾನದಲ್ಲಿ ಅ.29ರಂದು ದರ್ಶನ, ಪೂಜೆ, ಪ್ರಸಾದ ವಿನಿಯೋಗ, ವಿಶೇಷ ಸೇವೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ದೇವಳದ ಆಡಳಿತ ಮಂಡಳಿ ತಿಳಿಸಿದೆ.

ಗ್ರಹಣ ಆರಂಭದಿಂದ ದೇವಿಯ ಮೂಲ ವಿಗ್ರಹಕ್ಕೆ ನಿರಂತರ ಅಭಿಷೇಕ ನಡೆಯಲಿದ್ದು. ಈ ಸಮಯದಲ್ಲಿ ದರ್ಶನಕ್ಕೆ ಅವಕಾಶ ಇಲ್ಲ. ಗ್ರಹಣ ಮೋಕ್ಷದ ನಂತರ ಪ್ರಾತಃಕಾಲ 4 ಗಂಟೆಗೆ ದೇವಸ್ಥಾನ ತೆರೆಯಲಾಗುವುದು. ನಂತರ ಆಲಯ ಶುದ್ಧಿ, ಬಿಂಬ ಶುದ್ಧಿಯೊಂದಿಗೆ ದೇವಿಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ.

ಬೆಳಿಗ್ಗೆ ದೇವಸ್ಥಾನದ ಪ್ರಾಂಗಣದಲ್ಲಿ ಗ್ರಹಣ ಶಾಂತಿ ಹೋಮ, ಚಂಡಿಕಾ ಹೋಮ, ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಕ್ಷೇತ್ರದಲ್ಲಿ ಎಲ್ಲಾ ರೀತಿಯ ಸೇವೆ, ಸಾರ್ವಜನಿಕ ದರ್ಶನ, ಪೂಜಾ ಕೈಂಕರ್ಯಗಳು, ಪ್ರಸಾದ ವಿನಿಯೋಗ, ವಸತಿ ಸೇವೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್,ಆರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT