ಅಮರಾವತಿ: 2010ರಲ್ಲಿ ಬಾಬ್ಲಿ ಅಣೆಕಟ್ಟು ನಿರ್ಮಾಣ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಪ್ರಕರಣ ಸಂಬಂಧ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡುಸೇರಿದಂತೆ ಇತರೆ 15 ಮಂದಿ ವಿರುದ್ಧ ಮಹಾರಾಷ್ಟ್ರ ಕೋರ್ಟ್ ಗುರುವಾರ ಬಂಧನ ವಾರಂಟ್ ಅನ್ನು ಜಾರಿಗೊಳಿಸಿದೆ.
ನಾಂದೇಡ್ ಜಿಲ್ಲೆಯ ಧರ್ಮಾಬಾದ್ ಪ್ರಥಮ ದರ್ಜೆ ನ್ಯಾಯಾಲಯದ ನ್ಯಾಯಮೂರ್ತಿ ಎನ್.ಆರ್. ಗಜ್ಬಾಯ್ ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ಚಂದ್ರಬಾಬು ನಾಯ್ಡು ಸೇರಿದಂತೆ ಇತರೆ ಆರೋಪಿಗಳನ್ನು ಸೆಪ್ಟೆಂಬರ್ 21ರೊಳಗೆ ಕೋರ್ಟ್ಗೆ ಹಾಜರುಪಡಿಸಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ಪ್ರಕರಣ ಸಂಬಂಧ ಈ ಹಿಂದೆಯೂ ಚಂದ್ರಬಾಬು ನಾಯ್ಡು ಸೇರಿದಂತೆ ಟಿಡಿಪಿ ಕಾರ್ಯಕರ್ತರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು.
ರಾಜ್ಯ ಜಲ ಸಂಪನ್ಮೂಲ ಸಚಿವ ದೇವಿನೇಣಿ ಉಮಾಮಹೇಶ್ವರ ರಾವ್, ಸಮಾಜ ಕಲ್ಯಾಣ ಸಚಿವ ಎನ್. ಆನಂದ್ ಬಾಬು ಸೇರಿದಂತೆ ತೆಲುಗು ದೇಶಂ ಪಾರ್ಟಿ(ಟಿಡಿಪಿ) ಕಾರ್ಯಕರ್ತರು ಈ ಬಾರಿ ವಿಚಾರಣೆ ಎದುರಿಸಲಿದ್ದಾರೆ.
ಪ್ರಕರಣ ಕುರಿತು ನಾಯ್ಡು ಅವರ ಮಗ ರಾಜ್ಯ ಮಾಹಿತಿ ತಂತ್ರಜ್ಞಾನ ಸಚಿವ ಎನ್.ಲೊಕೇಶ್ ಪ್ರತಿಕ್ರಿಯಿಸಿದ್ದು, ‘ನಮ್ಮ ತಂದೆ ಸೇರಿದಂತೆ ಇತರೆ ಟಿಡಿಪಿ ಕಾರ್ಯಕರ್ತರು ಕೋರ್ಟ್ ವಿಚಾರಣೆಗೆ ಹಾಜರಾಗಲಿದ್ದಾರೆ’ ಎಂದು ಹೇಳಿದ್ದಾರೆ.
‘ನಾಯ್ಡು ಅವರು ತೆಲಂಗಾಣದ ಹಿತಾಸಕ್ತಿಗಳನ್ನು ಕಾಪಾಡಲು ಹೋರಾಡಿದ್ದರು. ಈ ಹಿಂದೆ ಅವರನ್ನು ಬಂಧಿಸಿದ್ದ ಸಮಯದಲ್ಲಿ ಜಾಮೀನು ಪಡೆಯಲು ನಿರಾಕರಿಸಿದ್ದರು’ ಎಂದು ಲೊಕೇಶ್ ತಿಳಿಸಿದ್ದಾರೆ.
ಸದ್ಯ ಚಂದ್ರಬಾಬು ನಾಯ್ಡು ಅವರು ತಿರುಪತಿಯಲ್ಲಿ ನಡೆಯುತ್ತಿರುವ ವೆಂಕಟೇಶ್ವರ ದೇವಾಲಯದ ವಾರ್ಷಿಕ ಬ್ರಹ್ಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.