ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆಯಿಂದ ಉಚ್ಚಾಟನೆ | ಹಲವು ಏಳು–ಬೀಳು ಕಂಡ ಮಹುವಾ ಮೊಯಿತ್ರಾ

Published 9 ಡಿಸೆಂಬರ್ 2023, 16:10 IST
Last Updated 9 ಡಿಸೆಂಬರ್ 2023, 16:10 IST
ಅಕ್ಷರ ಗಾತ್ರ

ಕೋಲ್ಕತ್ತ: ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಹಣ ಪಡೆದ ಆರೋಪದ ಅಡಿಯಲ್ಲಿ ಲೋಕಸಭೆಯಿಂದ ಉಚ್ಚಾಟನೆ ಆಗಿರುವ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರ 14 ವರ್ಷಗಳ ರಾಜಕೀಯ ಜೀವನದಲ್ಲಿ ಏಳು–ಬೀಳುಗಳು ಹಲವು.

ಸದ್ಯಕ್ಕೆ ಅವರ ಸಂಸದೀಯ ಬದುಕಿಗೆ ತಡೆ ಬಿದ್ದಿದೆಯಾದರೂ, ವಿರೋಧ ಪಕ್ಷಗಳು ಅವರಿಗೆ ಸೂಚಿಸಿರುವ ಬೆಂಬಲವು, ದೇಶದ ಇಂದಿನ ರಾಜಕೀಯದ ಮೇಲೆ ಮಹುವಾ ಅವರು ಬೀರಿರುವ ಪ್ರಭಾವವು ಬಹುಕಾಲ ಉಳಿಯುವಂಥದ್ದು ಎಂಬುದನ್ನು ಹೇಳುತ್ತಿದೆ.

ಮಹುವಾ ಅವರು ಜನಿಸಿದ್ದು ಅಸ್ಸಾಂ ರಾಜ್ಯದ ಕಛಡ್ ರಾಜ್ಯದಲ್ಲಿ. ಅವರು ಆರಂಭಿಕ ಶಿಕ್ಷಣ ಪಡೆದಿದ್ದು ಕೋಲ್ಕತ್ತದಲ್ಲಿ. ನಂತರ ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದರು. ಜೆಪಿ ಮಾರ್ಗನ್‌ ಚೇಸ್‌ನಲ್ಲಿ ಇನ್ವೆಸ್ಟ್‌ಮೆಂಟ್ ಬ್ಯಾಂಕರ್ ಆಗಿ ನ್ಯೂಯಾರ್ಕ್‌ ಮತ್ತು ಲಂಡನ್‌ನಲ್ಲಿ ಕೆಲಸ ಮಾಡಿರುವ ಮಹುವಾ ಅವರು, ರಾಹುಲ್ ಗಾಂಧಿ ಅವರು ಆರಂಭಿಸಿದ ‘ಆಮ್‌ ಆದ್ಮಿ ಕಾ ಸಿಪಾಯಿ’ ಕಾರ್ಯಕ್ರಮದಿಂದಾಗಿ ಬದುಕಿನ ಗತಿ ಬದಲಿಸಿಕೊಂಡರು.

ತಮ್ಮ ಉದ್ಯೋಗಕ್ಕೆ ರಾಜೀನಾಮೆ ಸಲ್ಲಿಸಿ, 2009ರಲ್ಲಿ ಕಾಂಗ್ರೆಸ್ಸಿನ ಯುವ ಘಟಕವನ್ನು ಸೇರಿದರು. ಪಶ್ಚಿಮ ಬಂಗಾಳ ಘಟಕದಲ್ಲಿ ಕಾಗ್ರೆಸ್ ನಾಯಕ ಸುಬ್ರತ ಮುಖರ್ಜಿ ಅವರ ಜೊತೆ ಕೆಲಸ ಮಾಡಿದರು. 2010ರಲ್ಲಿ ಮಹುವಾ ಮತ್ತು ಮುಖರ್ಜಿ ಅವರು ಟಿಎಂಸಿ ಸೇರಿದರು.

2016ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ತಮ್ಮ ಭಾಷಣ ಹಾಗೂ ಚರ್ಚಾ ಕೌಶಲದ ಕಾರಣದಿಂದಾಗಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಪಕ್ಷವನ್ನು ಪ್ರತಿನಿಧಿಸುವ ಪ್ರಮುಖ ವ್ಯಕ್ತಿಯಾಗಿ ಬೆಳೆದರು. 2019ರಲ್ಲಿ ಕೃಷ್ಣನಗರ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದು ಜಯ ಸಾಧಿಸಿದರು.

ಮನಸ್ಸಿನಲ್ಲಿ ಇದ್ದುದನ್ನು ನೇರವಾಗಿ ಹೇಳುವ ಮಹುವಾ ಅವರು, ಸಂಘಟನೆಯ ವಿಚಾರದಲ್ಲಿ ಪಕ್ಷದ ಪ್ರಮುಖರ ನಿಲುವಿಗೆ ಭಿನ್ನವಾದ ಮಾತು ಆಡುತ್ತಿದ್ದರು. ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರು ಮಹುವಾ ಬಗ್ಗೆ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದೂ ಇದೆ.

ಕಳೆದ ಎರಡು ವರ್ಷಗಳಲ್ಲಿ ಮಹುವಾ ಅವರ ಹೆಸರು ವಿವಾದಗಳಿಗೆ ಪರ್ಯಾಯ ಪದವಾಗಿತ್ತು. ಪತ್ರಕರ್ತರನ್ನು ‘ಎರಡು ಪೈಸೆ ಪತ್ರಕರ್ತರು’ ಎಂದು ಹೇಳಿದ ಕಾರಣಕ್ಕೆ ಬಂಗಾಳಿ ಮಾಧ್ಯಮಗಳು ಬಹುಕಾಲ ಅವರನ್ನು ಬಹಿಷ್ಕರಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT