ಕೋಲ್ಕತ್ತ (ಪಿಟಿಐ): ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಕೇಂದ್ರ ಸರ್ಕಾರದಿಂದ ಪಶ್ಚಿಮ ಬಂಗಾಳಕ್ಕೆ ಸಂದಾಯವಾಗಬೇಕಿರುವ ಬಾಕಿ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೊರೆಯುವ ಚಳಿಯಲ್ಲಿ ಶುಕ್ರವಾರ ಅಹೋರಾತ್ರಿ ಧರಣಿ ನಡೆಸಿದರು.
ರಾಜ್ಯ ಸಚಿವರಾದ ಫಿರ್ಹಾದ್ ಹಕೀಮ್ ಮತ್ತು ಅನೂಪ್ ಬಿಸ್ವಾಸ್ ಅವರ ಜೊತೆ ಹತ್ತಿರದ ರೆಡ್ ರಸ್ತೆಯಲ್ಲಿ ಶನಿವಾರ ನಸುಕಿನ ಜಾವ ಮಮತಾ ವಾಯುವಿಹಾರಕ್ಕೆ ತೆರಳಿದರು. ನಂತರ ಬ್ಯಾಸ್ಕೆಟ್ಬಾಲ್ ಮೈದಾನಕ್ಕೆ ಭೇಟಿ ನೀಡಿದರು.
ಇಲ್ಲಿಯ ಮೈದಾನ ಪ್ರದೇಶದ ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವು ಶುಕ್ರವಾರ ಮಧ್ಯಾಹ್ನ ಧರಣಿ ಆರಂಭಿಸಿದೆ.
‘ನಗರದಲ್ಲಿ ದಟ್ಟ ಹಿಮ ಆವರಿಸಿದ್ದರೂ ಮಮತಾ ಅವರು ವಾಯುವಿಹಾರಕ್ಕೆ ತೆರಳಿದರು. ಆ ವೇಳೆ ಬ್ಯಾಸ್ಕೆಟ್ ಬಾಲ್ ಆಟಗಾರರ ಜೊತೆ ಚರ್ಚಿಸಿದರು. ಆಟದ ಬಗ್ಗೆ ತಿಳಿಯುವ ಪ್ರಯತ್ನ ಮಾಡಿದರು. ಈ ವೇಳೆ ಭದ್ರತಾ ಸಿಬ್ಬಂದಿ ಅವರ ಜೊತೆ ಇದ್ದರು’ ಎಂದು ಟಿಎಂಸಿ ನಾಯಕರೊಬ್ಬರು ತಿಳಿಸಿದ್ದಾರೆ.
ನರೇಗಾ, ಪ್ರಧಾನ ಮಂತ್ರಿ ಆವಾಸ್ ಯೋಜನೆ ಸೇರಿ ಹಲವಾರು ಯೋಜನೆಗಳಿಗೆ ಸಾವಿರಾರು ಕೋಟಿ ಹಣ ನೀಡುವುದಾಗಿ ಕೇಂದ್ರ ಭರವಸೆ ನೀಡಿತ್ತು. ಆದರೆ ಮಾತಿನಂತೆ ನಡೆದುಕೊಂಡಿಲ್ಲ ಎಂಬುದು ಟಿಎಂಸಿ ಆರೋಪ.
ಪಶ್ಚಿಮ ಬಂಗಾಳದ ಬಜೆಟ್ ಅಧಿವೇಶನವು ಸೋಮವಾರ ಆರಂಭವಾಗುವ ಹಿನ್ನೆಲೆಯಲ್ಲಿ ಧರಣಿಯು ಭಾನುವಾರ ರಾತ್ರಿಗೆ ಮುಕ್ತಾಯವಾಗಲಿದೆ.