ನವದೆಹಲಿ:ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯಕ್ರಿಯೆಗೆ ಪಾರ್ಥೀವ ಶರೀರದ ಮೆರವಣಿಗೆ ಆರಂಭವಾಗಿದೆ.
ಬಿಜೆಪಿ ಕೇಂದ್ರ ಕಚೇರಿಯಿಂದ ಅಂತ್ಯಕ್ರಿಯೆ ನೆರವೇರುವ ಸ್ಮೃತಿ ಸ್ಥಳದತ್ತ ಮೆರವಣಿಗೆ ತೆರಳುತ್ತಿದೆ. ಸಾಕಷ್ಟು ಮಿಲಿಟರಿ ಭದ್ರತೆಯೊಂದಿಗೆ ಮೆರವಣಿಗೆ ಸಾಗುತ್ತಿದೆ.
ನಾಲ್ಕು ಕಿ.ಮೀ.ದೂರ ಮೆರವಣಿಗೆ ಸಾಗಲಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಸಾವಿರಾರು ಅಭಿಮಾನಿಗಳು ನೆರೆದಿದ್ದು ನೆಚ್ಚಿನ ನಾಯಕನಿಗೆ ವಿದಾಯ ಹೇಳುತ್ತಿದ್ದಾರೆ. ಮೆರವಣಿಗೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಜನ ಸೇರಿದ್ದಾರೆ.
ವಾಜಪೇಯಿ ಅವರ ನಿವಾಸದಲ್ಲಿ ಇರಿಸಿದ್ದ ಅವರ ಪಾರ್ಥಿವ ಶರೀರವನ್ನು ಬೆಳಿಗ್ಗೆ 9ಕ್ಕೆ ಬಿಜಪಿ ಕಚೇರಿಯಲ್ಲಿ ಇರಿಸಿ, ಅಂತಿಮ ನಮನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ ಸಿಂಗ್, ಪಕ್ಷದ ಅಧ್ಯಕ್ಷ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದರು.
ಅನಾರೋಗ್ಯ ನಿಮಿತ್ತ ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಾಜಪೇಯಿ ಅವರು ಗುರುವಾರ ಸಂಜೆ 5.5ಕ್ಕೆ ಕೊನೆಯುಸಿರೆಳೆದಿದ್ದರು.
‘ಅಜಾತಶತ್ರು’ ಎಂದೇ ಬಣ್ಣಿಸಲ್ಪಟ್ಟಿದ್ದ ಅವರು ಸರ್ವರ ಮೆಚ್ಚಿನ ನಾಯಕರಾಗಿದ್ದರು.