ಬೆಂಗಳೂರು: 'ರಾಮ ಮಾಂಸಾಹಾರಿ' ಎಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ನಾಯಕ ಜಿತೇಂದ್ರ ಅವ್ಹಾದ್ ಅವರು ತಮ್ಮ ಹೇಳಿಕೆಗೆ ವಿಷಾದಿಸಿದ್ದಾರೆ.
ಎನ್ಸಿಪಿಯ ಶರದ್ ಪವಾರ್ ಬಣದಲ್ಲಿ ಗುರುತಿಸಿಕೊಂಡಿರುವ ಜಿತೇಂದ್ರ ಅವರು, ರಾಮ ಮಾಂಸಾಹಾರಿ ಎನ್ನುವ ವಿಚಾರದ ಕುರಿತು ಭಾವನಾತ್ಮಕವಾಗಿ ಮತ್ತು ವಿಷಯಾಧಾರಿತವಾಗಿ – ಎರಡು ರೀತಿಯಲ್ಲಿ ಚರ್ಚಿಸಲಾಗುತ್ತದೆ. ಆದರೆ, ಜನವರಿ 22ರ ವರೆಗೆ ಯಾರೊಬ್ಬರೂ ತಾರ್ಕಿಕವಾಗಿ ಮಾತನಾಡುವುದಿಲ್ಲ. ಹಾಗಾಗಿ ನನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸುತ್ತಿದ್ದೇನೆ. ಯಾರೊಬ್ಬರ ಭಾವನೆಗಳಿಗೆ ನೋವು ಮಾಡುವ ಉದ್ದೇಶ ನನ್ನದಲ್ಲ ಎಂದು ಹೇಳಿದ್ದಾರೆ.
ಆದಾಗ್ಯೂ ಅವರು, ವಾಲ್ಮೀಕಿ ಬರೆದಿರುವ ರಾಮಾಯಣದಲ್ಲೇ 'ರಾಮ ಮಾಂಸಾಹಾರಿ' ಎಂದು ಉಲ್ಲೇಖಿಸಲಾಗಿದೆ ಎನ್ನುವ ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.