ಬೆಂಗಳೂರು: ಹಿಮಾಲಯದ ತಪ್ಪಲಿನ ರಾಜ್ಯ ಹಿಮಾಚಲಪ್ರದೇಶದ ಶಿಮ್ಲಾದಲ್ಲಿ ಪ್ರತಿಕೂಲ ವಾತಾವರಣ ಹಿನ್ನೆಲೆಯಲ್ಲಿ ವಿರೋಧಪಕ್ಷಗಳ ಸಭೆಯನ್ನು ಜುಲೈ 13–14ರಂದು ಬೆಂಗಳೂರಿನಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ.
ಪುಣೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎನ್ಸಿಪಿ ವರಿಷ್ಠ ಶರದ್ ಪವಾರ್ ಈ ಘೋಷಣೆ ಮಾಡಿದ್ದಾರೆ. ಶಿಮ್ಲಾದ ಮುಂಗಾರು ವಾತಾವರಣದ ಹಿನ್ನೆಲೆಯಲ್ಲಿ ಸಭೆಯ ಸ್ಥಳವನ್ನು ಶಿಮ್ಲಾದಿಂದ ಬೆಂಗಳೂರಿಗೆ ಬದಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಭೆಯನ್ನು ಯಾವ ದಿನಾಂಕದದಂದು? ಎರಡು ದಿನ ನಡೆಸಬೇಕೆ? ಎಂಬ ಕುರಿತು ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಈ ಘೋಷಣೆಯು ಕೆಲ ವಿರೋಧ ಪಕ್ಷಗಳಿಗೆ ಅಚ್ಚರಿ ತಂದಿದ್ದು, ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜಸ್ಥಾನದ ಜೈಪುರ ಕೆಲವರ ಆಯ್ಕೆಯಾಗಿತ್ತು. ಇಲ್ಲಿ ವಿಧಾನಸಭೆ ಚುನಾವಣೆ ಸಹ ನಡೆಯಲಿದ್ದು, ಶಕ್ತಿಪ್ರದರ್ಶನದ ಮೂಲಕ ಮತದಾರರಿಗೆ ಧನಾತ್ಮಕ ಸಂದೆಶ ಸಾರಬಹುದಾಗಿತ್ತು ಎಂಬುದು ಕೆಲವರ ವಾದವಾಗಿದೆ.
ಆದರೆ, ಕೆಲ ಮುಖಂಡರ ಸಲಹೆ ಪಡೆದು ಬೆಂಗಳೂರಿನಲ್ಲಿ ಸಭೆ ನಡೆಸಲು ನಿರ್ಧರಿಸಲಾಗಿದೆ. ಜೂನ್ 13-14 ರಂದು ಸಭೆ ನಡೆಯುತ್ತಿದ್ದು, ಅಂದು ಪಕ್ಷದ ಸಭೆ ನಿಗದಿಯಾಗಿರುವುದರಿಂದ ಹಾಜರಾಗಲು ಕಷ್ಟವಾಗುತ್ತದೆ ಎಂದು ಪ್ರತಿಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಶಿಮ್ಲಾದಿಂದ ಸ್ಥಳಾಂತರಗೊಳ್ಳಲು ಕಾರಣವೆಂದರೆ ಭಾರಿ ಮಳೆ ಮತ್ತು ಭೂಕುಸಿತದ ಸಂದರ್ಭದಲ್ಲಿ ನಾಯಕರು ನಗರಕ್ಕೆ ತಲುಪಲು ಕಷ್ಟವಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ, ಕೆಲವು ನಾಯಕರು ಚಾರ್ಟರ್ಡ್ ಫ್ಲೈಟ್ಗಳು ಮತ್ತು ಖಾಸಗಿ ಜೆಟ್ಗಳಲ್ಲಿ ಆಗಮಿಸುತ್ತಾರೆ. ಹವಾಮಾನವು ಪ್ರತಿಕೂಲವಾಗಿದ್ದರೆ ಪ್ರಮುಖ ಸಭೆಗೆ ಹಾಜರಾಗಲು ಅವರಿಗೆ ಕಷ್ಟವಾಗುತ್ತಿತ್ತು.
ಜೂನ್ 23ರಂದು ನಡೆದ ಪಟ್ನಾ ಸಭೆಯಲ್ಲಿ, ಪಕ್ಷಗಳು ಜುಲೈ ಸಭೆಗೆ ಶಿಮ್ಲಾವನ್ನು ತಮ್ಮ ಮುಂದಿನ ತಾಣವಾಗಿ ನಿಗದಿಪಡಿಸಿದ್ದವು. 2024ರಲ್ಲಿ ಒಗ್ಗಟ್ಟಿನಿಂದ ಹೋರಾಡುವ ಮೂಲಕ ಬಿಜೆಪಿಯನ್ನು ಸೋಲಿಸಲು ವಿಪಕ್ಷಗಳು ನಿರ್ಧರಿಸಿದ್ದವು.