ಅಲೀಗಡ(ಉತ್ತರ ಪ್ರದೇಶ): ಕಾಲೇಜಿನ ಹುಲ್ಲುಹಾಸಿನ ಮೇಲೆ ನಮಾಜ್ ಮಾಡಿದ ಇಲ್ಲಿನ ಪ್ರಾಧ್ಯಾಪಕರೊಬ್ಬರನ್ನು ಒಂದು ತಿಂಗಳ ಕಾಲ ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ. ಇವರು ನಮಾಜ್ ಮಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.
ಶ್ರೀ ವಾರ್ಷ್ಣೇಯ ಕಾಲೇಜಿನ ಪ್ರಾಧ್ಯಾಪಕ ಎಸ್.ಆರ್. ಖಾಲಿದ್ ಎಂಬುವವರನ್ನು ರಜೆಯ ಮೇಲೆ ಕಳುಹಿಸಲಾಗಿದ್ದು, ಇವರ ವಿರುದ್ಧ ಕ್ರಮಕೈಗೊಳ್ಳುವಂತೆ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಮುಖಂಡರು ಆಗ್ರಹಿಸಿದ್ದರು.
ಖಾಲಿದ್ ಅವರ ವಿರುದ್ಧ ಕುವಾರ್ಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಲೇಜಿನ ಅಧಿಕಾರಿಗಳಿಂದ ವರದಿ ಪಡೆದು ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.