ನವದೆಹಲಿ: ‘ಜವಾಹರಲಾಲ್ ನೆಹರೂ ಅವರು ತಮ್ಮ ಅವಧಿಯಲ್ಲಿ ಕೈಗೊಂಡ ಕೆಲಸಗಳಿಂದ ಚಿರಪರಿಚಿತರೇ ಹೊರತು, ಕೇವಲ ಹೆಸರಿನಿಂದಲ್ಲ’ ಎಂದು ನೆಹರೂ ಮರಿ ಮೊಮ್ಮಗ ರಾಹುಲ್ ಗಾಂಧಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ನೆಹರೂ ಸ್ಮಾರಕ ಮ್ಯೂಸಿಯಂ ಹಾಗೂ ಗ್ರಂಥಾಲಯ (ಎನ್ಎಂಎಂಎಲ್) ಹೆಸರನ್ನು ಪ್ರಧಾನಮಂತ್ರಿ ಸ್ಮಾರಕ ಮ್ಯೂಸಿಯಂ ಹಾಗೂ ಗ್ರಂಥಾಲಯ (ಪಿಎಂಎಂಎಲ್) ಎಂದು ಬದಲಿಸಿದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು. ಲೇಹ್ಗೆ ಎರಡು ದಿನಗಳ ಭೇಟಿಗಾಗಿ ವಿಮಾನ ನಿಲ್ದಾಣಕ್ಕೆ ಗುರುವಾರ ಬಂದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಹೆಸರು ಬದಲಾವಣೆ ವಿಷಯವಾಗಿ ಬಿಜೆಪಿ ಹಾಗೂ ವಿರೋಧ ಪಕ್ಷಗಳ ನಡುವೆ ವಾಕ್ ಸಮರ ನಡೆದಿದೆ. ಕಾಂಗ್ರೆಸ್ನ ಜೈರಾಮ್ ರಮೇಶ್ ಅವರು ಪ್ರತಿಕ್ರಿಯಿಸಿ, ‘ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಜವಾಹರಲಾಲ್ ನೆಹರೂ ಅವರ ಅದ್ಭುತ ಕೊಡುಗೆಯನ್ನು ನರೇಂದ್ರ ಮೋದಿ ಎಂದಿಗೂ ಕಸಿದಿಕೊಳ್ಳಲು ಆಗುವುದಿಲ್ಲ’ ಎಂದರು.
#WATCH | On Nehru Memorial Museum and Library renamed as Prime Minister's Museum and Library, Congress leader Rahul Gandhi says "Nehru Ji is known for the work he did and not just his name"
— ANI (@ANI) August 17, 2023
(Nehru Ji ki pehchaan unke karam hai, unka naam nahi) pic.twitter.com/X2otaLJiPa
ಮೈಕ್ರೊ ಬ್ಲಾಗಿಂಗ್ ತಾಣವಾದ ಎಕ್ಸ್ (ಟ್ವಿಟರ್)ನಲ್ಲಿರುವ ತಮ್ಮ ಖಾತೆಯಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಅವರು, ‘ವಸ್ತುಸಂಗ್ರಹಾಲಯ ಹಾಗೂ ಗ್ರಂಥಾಲಯದ ಹೆಸರನ್ನು ನರೇಂದ್ರ ಮೋದಿ ಬದಲಿಸಿದ್ದಾರೆ. ದೇಶದ ಮೊದಲ ಹಾಗೂ ದೀರ್ಘಾವಧಿಗೆ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರೂ ಅವರ ವಿಷಯಕ್ಕೆ ಬಂದಲ್ಲಿ, ಮೋದಿ ಅವರು ಭಯ, ಅಭದ್ರತೆಯಿಂದ ಬಳಲುತ್ತಿರುವುದು ಸ್ಪಷ್ಟ. ಮೋದಿ ಅವರ ಏಕೈಕ ಉದ್ದೇಶವೆಂದರೆ ನೆಹರೂ ಹಾಗೂ ಅವರ ಕಾಲಘಟ್ಟದ ಕೆಲಸಗಳನ್ನು ನಾಶ ಮಾಡುವುದು, ಅಲ್ಲಗಳೆಯುವುದು, ಹೆಸರು ಕೆಡಿಸುವ ಕೆಲಸ ಮಾಡುವುದಷ್ಟೇ’ ಎಂದಿದ್ದಾರೆ.
ಪಿಎಂಎಂಎಲ್ನ ಉಪಾಧ್ಯಕ್ಷ ಸೂರ್ಯ ಪ್ರಕಾಶ್ ಅವರು ಬುಧವಾರ ಮಾತನಾಡಿ, ‘ಈ ನೂತನ ವಸ್ತುಸಂಗ್ರಹಾಲಯವು ಜವಾಹರಲಾಲ್ ನೆಹರೂ ಅವರು ದೇಶಕ್ಕೆ ನೀಡಿದ ಅದ್ಭುತ ಕೊಡುಗೆಗಳನ್ನು ಪ್ರದರ್ಶಿಸಲಿದೆ. ನೆಹರೂ ಅವರು ಆಧುನಿಕ ಭಾರತಕ್ಕೆ ನೀಡಿದ ಕೊಡುಗಡೆ, ಯೋಜನಾ ಆಯೋಗ, ತಂತ್ರಜ್ಞಾನ ಸಂಸ್ಥೆಗಳ ಆರಂಭ ಸೇರಿದಂತೆ ಹಲವು ಮಾಹಿತಿಗಳು ಕೇಂದ್ರಕ್ಕೆ ಭೇಟಿ ನೀಡಿದವರಿಗೆ ಸಿಗಲಿದೆ’ ಎಂದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.