ನವದೆಹಲಿ: ಹಿಮಾಚಲ ಪ್ರದೇಶದಲ್ಲಿ 40 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ ಮರಳಿದೆ.
ಈ ಕುರಿತಂತೆ ಹಿಮಾಚಲ ಪ್ರದೇಶದ ಜನರಿಗೆ ಧನ್ಯವಾದ ಹೇಳಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ‘ಚುನಾವಣೆ ಸಂದರ್ಭ ಜನರಿಗೆ ನೀಡಲಾದ ಎಲ್ಲ ಭರವಸೆಗಳನ್ನು ಆದಷ್ಟು ಬೇಗ ಈಡೇರಿಸುತ್ತೇವೆ ಎಂದು ನಾನು ಮತ್ತೊಮ್ಮೆ ಭರವಸೆ ನೀಡುತ್ತೇನೆ’ಎಂದು ಹೇಳಿದ್ದಾರೆ.
‘ಇದು ನಿಮ್ಮೆಲ್ಲರ ಗೆಲುವಾಗಿದೆ. ಥ್ಯಾಂಕ್ಯೂ ಹಿಮಾಚಲ ಪ್ರದೇಶ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
‘ಈ ವಿಜಯಕ್ಕೆ ಹಿಮಾಚಲ ಪ್ರದೇಶದ ಎಲ್ಲ ಮತದಾರರಿಗೆ ಹೃದಯ ಪೂರ್ವಕ ಧನ್ಯವಾದ ಹೇಳುತ್ತೇನೆ. ಎಲ್ಲ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರಿಗೆ ಶುಭಾಶಯ. ಈ ಜಯದ ಹಿಂದೆ ನಿಜವಾಗಿಯೂ ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಇದೆ’ಎಂದು ರಾಹುಲ್ ಹೇಳಿದ್ದಾರೆ.
ಹಿಮಾಚಲಪ್ರದೇಶ ಸೇರಿ ದೇಶದ 3 ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಜಾರ್ಖಂಡ್, ಬಿಹಾರ, ತಮಿಳುನಾಡಿನಲ್ಲಿ ಮೈತ್ರಿ ಸರ್ಕಾರವಿದೆ.
ಈ ಮಧ್ಯೆ, ಬಿಜೆಪಿಯವರು ತಮ್ಮ ಶಾಸಕರನ್ನು ಸೆಳೆಯಲು ಯತ್ನಿಸಬಹುದು. ಅವರ ರಕ್ಷಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಕಾಂಗ್ರೆಸ್ ಮುಖಂಡ ಭೂಪೇಶ್ ಬಘೇಲ್ ಹೇಳಿದ್ದಾರೆ.
‘ನಾವು ನಮ್ಮ ನಾಯಕರನ್ನು ಚಂಡೀಗಢಕ್ಕೆ ಕರೆದೊಯ್ಯುತ್ತಿದ್ದೇವೆ. ಶಾಸಕರನ್ನು ಸೆಳೆಯುವ ಬಿಜೆಪಿಯ ಯತ್ನಕ್ಕೆ ಪಕ್ಷದ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚುತ್ತಿದ್ದೇವೆ. ಈ ಹಿಂದೆ ಹಲವು ಬಾರಿ ಬಿಜೆಪಿ ಆ ಕೆಲಸ ಮಾಡಿದೆ’ಎಂದು ಹಿಮಾಚಲ ಪ್ರದೇಶದ ಪಕ್ಷದ ಉಸ್ತುವಾರಿ ತಜಿಂದರ್ ಸಿಂಗ್ ಬಿಟ್ಟು ಹೇಳಿದ್ಧಾರೆ.