ನವದೆಹಲಿ: ‘ಕೊರೊನಾ ಸೋಂಕಿತರ ಸಂಖ್ಯೆಯು ದೇಶದಲ್ಲಿ ಐದು ಲಕ್ಷ ದಾಟಿದ್ದು, ಈ ಪಿಡುಗನ್ನು ತಡೆಯಲು ಸರ್ಕಾರದ ಮುಂದೆ ಯಾವುದೇ ಯೋಜನೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಕೊರೊನಾದ ಮುಂದೆ ಶರಣಾಗಿದ್ದಷ್ಟೇ ಅಲ್ಲ, ಅದರ ವಿರುದ್ಧ ಹೋರಾಡಲು ಸಹ ನಿರಾಕರಿಸಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್, ‘ಪ್ರಧಾನಿ ಮೌನವಾಗಿದ್ದಾರೆ. ಅವರು ಶರಣಾಗಿದ್ದಾರೆ ಮತ್ತು ಪಿಡುಗಿನ ವಿರುದ್ಧ ಹೋರಾಡಲು ನಿರಾಕರಿಸಿದ್ದಾರೆ’ ಎಂದಿದ್ದಾರೆ.
Covid19 is spreading rapidly into new parts of the country. GOI has no plan to defeat it.
PM is silent. He has surrendered and is refusing to fight the pandemic.https://t.co/LUn2eYBQTg
ಟ್ವೀಟ್ ಜತೆಗೆ ಒಂದು ವರದಿಯನ್ನು ಟ್ಯಾಗ್ ಮಾಡಿರುವ ಅವರು, ‘ಐಸಿಎಂಆರ್ನ ಮಂಡಳಿಯಾಲಿ, ಸಚಿವರಾಗಲಿ ಈವರೆಗೆ ಸಭೆ ನಡೆಸಲಿಲ್ಲ. ಆರೋಗ್ಯ ಸಚಿವರೂ ಪಿಡುಗಿನ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿಲ್ಲ’ ಎಂದಿದ್ದಾರೆ.
ಶುಕ್ರವಾರ ಬೆಳಿಗ್ಗೆ 8ರಿಂದ ಶನಿವಾರ ಬೆಳಿಗ್ಗೆ 8 ಗಂಟೆವರೆಗಿನ ಅವಧಿಯಲ್ಲಿ ದೇಶದಲ್ಲಿ 18,552 ಮಂದಿ ಹೊಸದಾಗಿ ಕೊರೊನಾ ಸೋಂಕಿತರಾಗಿದ್ದು, 384 ಮಂದಿ ಮೃತಪಟ್ಟಿದ್ದಾರೆ. ಒಟ್ಟಾರೆ ಸೋಂಕಿತರ ಸಂಖ್ಯೆಯು 5,08,953 ಆಗಿದೆ. ಈವರೆಗೆ 15,685 ಮಂದಿ ಕೋವಿಡ್–19ನಿಂದ ಸಾವಿಗೀಡಾಗಿದ್ದಾರೆ.