ನವದೆಹಲಿ: ರಾಷ್ಟ್ರೀಯ ರಜಪೂತ ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಾಮೆಡಿ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇಬ್ಬರು ಶೂಟರ್ಗಳು ಸೇರಿದಂತೆ ಮೂವರನ್ನು ಪೊಲೀಸರು ಚಂಡೀಗಢದಲ್ಲಿ ಬಂಧಿಸಿದ್ದಾರೆ.
ರಾಜಸ್ಥಾನ ಪೊಲೀಸರೊಂದಿಗೆ ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆಹಿಡಿದಿದ್ದಾರೆ.
ಡಿಸೆಂಬರ್ 5 ರಂದು ಸುಖದೇವ್ ಸಿಂಗ್ ಅವರನ್ನು ಜೈಪುರದಲ್ಲಿರುವ ಅವರ ಮನೆಯ ಲಿವಿಂಗ್ ರೂಮಿನಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ದುಷ್ಕರ್ಮಿಗಳು ಗುಂಡು ಹಾರಿಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಂತಕರನ್ನು ಜೈಪುರದ ರೋಹಿತ್ ರಾಥೋಡ್ ಮತ್ತು ಹರಿಯಾಣದ ಮಹೇಂದ್ರಗಢ್ನ ನಿತಿನ್ ಫೌಜಿ ಎಂದು ಪೊಲೀಸರು ಗುರುತಿಸಿದ್ದರು. ಅವರ ಬಗ್ಗೆ ಮಾಹಿತಿ ನೀಡಿದರೆ ₹5 ಲಕ್ಷ ನಗದು ಬಹುಮಾನವನ್ನು ನೀಡುವುದಾಗಿ ಘೋಷಿಸಿದ್ದರು. ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಚಂಡೀಗಢದ ಸೆಕ್ಟರ್ 22ನಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಅವರ ಜೊತೆಯಲ್ಲಿ ಮತ್ತೊಬ್ಬ ಸಹಚರ ಉಧಮ್ ಸಿಂಗ್ ಕೂಡ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಜೈಪುರ ಪೊಲೀಸರ ವಶಕ್ಕೆ ನೀಡಲಾಗಿದೆ.