ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಗಣ್ಯರು ದೇಶದ ಜನತೆಗೆ ರಕ್ಷಾ ಬಂಧನ ಶುಭಾಶಯ ಕೋರಿದ್ದಾರೆ.
ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ರಕ್ಷಾ ಬಂಧನದ ಶುಭಾಶಯ ತಿಳಿಸಿರುವ ಮೋದಿ, ‘ಸಹೋದರ–ಸಹೋದರಿಯರ ನಡುವಿನ ಪವಿತ್ರ ಸಂಬಂಧವನ್ನು ಗಟ್ಟಿಗೊಳಿಸುವ ಈ ಹಬ್ಬವು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಈ ಹಬ್ಬವು ಸಾಮರಸ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲಿ ಎಂದು ಆಶಿಸುತ್ತೇನೆ. ಪ್ರತಿಯೊಬ್ಬರಿಗೂ ರಕ್ಷಾ ಬಂಧನದ ಶುಭಾಶಯಗಳು’ ಎಂದು ಹೇಳಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಶುಭಾಶಯ ತಿಳಿಸಿದ್ದಾರೆ. ‘ರಕ್ಷಾ ಬಂಧನ ಹಬ್ಬವು ಸಹೋದರ–ಸಹೋದರಿಯರ ನಡುವೆ ಪ್ರೀತಿಯ ಸಂಕೇತವಾಗಿದೆ. ಈ ಶುಭ ಸಂದರ್ಭದಲ್ಲಿ ದೇಶದ ಮಹಿಳೆಯರಿಗೆ ಹೆಚ್ಚು ಸುರಕ್ಷಿತ ಮತ್ತು ಸಮಾನ ವಾತಾವರಣವನ್ನು ನಿರ್ಮಿಸಲು ಪ್ರತಿಜ್ಞೆ ಮಾಡೋಣ’ ಎಂದು ತಿಳಿಸಿದರು.
ರಕ್ಷಾ ಬಂಧನದ ಶುಭಾಶಯ ತಿಳಿಸಿರುವ ಮಲ್ಲಿಕಾರ್ಜುನ ಖರ್ಗೆ, ‘ಜಾತಿ, ಮತ, ಪಂಥ ಮೀರಿ ದೇಶವಾಸಿಗಳ ನಡುವೆ ಸಹೋದರತ್ವವನ್ನು ಬೆಳೆಸುವ ಹಬ್ಬ ರಕ್ಷಾ ಬಂಧನ ಎಂದು ಹೇಳಿದ್ದಾರೆ. ಭಾರತೀಯ ಸಮಾಜದಲ್ಲಿ ಮಹಿಳಾ ಸಮಾನತೆಯನ್ನು ಈ ಹಬ್ಬ ಎತ್ತಿ ಹಿಡಿದಿದೆ’ ಎಂದು ತಿಳಿಸಿದರು.