ಕೋಯಿಕ್ಕೋಡ್ (ಕೇರಳ): ಚಾಲಪ್ಪುರಂ ಬಳಿ ಇರುವ ಕೇಸರಿ ಮಾಧ್ಯಮ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್ಎಸ್ಎಸ್) ಮುಖ್ಯಸ್ಥರಾದ ಮೋಹನ್ ಭಾಗವತ್ ಮಂಗಳವಾರ ಉದ್ಘಾಟಿಸಿದರು.
‘ಸಂಘ ಪರಿವಾರದ ಅಂಗವಾದ ಕೇಸರಿ ವಾರಪತ್ರಿಕೆಯು 1951ರಲ್ಲಿ ಪ್ರಾರಂಭವಾಯಿತು. ಭಾರತದ ಉನ್ನತಿಯ ಆಲೋಚನೆಯ ಗುರಿಯನ್ನಿಟ್ಟುಕೊಂಡು ಕೇಸರಿ ನಡೆದಿದೆ. ಕಳೆದ 70 ವರ್ಷದಲ್ಲಿ ಕೇಸರಿಯ ಪಥ ಸುಲಭವಾಗಿರಲಿಲ್ಲ. ಇಂದಿನ ಪೀಳಿಗೆ ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಭಾಗವತ್ ಹೇಳಿದರು.
‘ಸತ್ಯವನ್ನು ಪ್ರಕಟಿಸುವುದಕ್ಕೂ ಒಪ್ಪಿಗೆ ಪಡೆಯಬೇಕಾದ ಕಾಲವಿತ್ತು. ಸತ್ಯದ ಮೇಲಿರುವ ನಂಬಿಕೆ ಹಾಗೂ ಕಠಿಣ ಶ್ರಮವು ಯಶಸ್ಸಿಗೆ ಕಾರಣವಾಗುತ್ತದೆ. ಇದನ್ನು ಕೇಸರಿ ಸಾಧಿಸಿದೆ’ ಎಂದರು.
ರಾಜ್ಯದಲ್ಲಿ ಹುತಾತ್ಮರಾದ ಆರ್ಎಸ್ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಕುರಿತು ಇರುವ ಡಾ.ಎ.ಕೆ.ಎಂ.ದಾಸ್ ಅವರು ಬರೆದಿರುವ ‘ಆರ್ಎಸ್ಎಸ್ ಇನ್ ಕೇರಳ: ಸಾಗ ಆಫ್ ಎ ಸ್ಟ್ರಗಲ್’ ಸೇರಿದಂತೆ ಎಂಟು ಕೃತಿಗಳನ್ನು ಭಾಗವತ್ ಬಿಡಯಗಡೆಗೊಳಿಸಿದರು.