ನವದೆಹಲಿ: ಸನಾತನ ಧರ್ಮದ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ಸೋಮವಾರ ಇಲ್ಲಿನ ತಮಿಳುನಾಡು ಭವನದ ಎದುರು ವಿವಿಧ ಸಂತರು ಧರಣಿ ನಡೆಸಿದರು. ಸಚಿವ ಉದಯನಿಧಿ ಸ್ಟಾಲಿನ್, ಇತರರ ಪ್ರತಿಕೃತಿಯನ್ನು ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಉದಯನಿಧಿ ಅವರನ್ನು ಬೆಂಬಲಿಸಿ ಹೇಳಿಕೆ ನೀಡಿದ್ದ ರಾಜಕಾರಣಿಗಳ ವಿರುದ್ಧವೂ ಘೋಷಣೆ ಕೂಗಿ ಪ್ರತಿಭಟಿಸಿದರು. ಸರೋಜಿನಿ ನಗರದ ದೇಗುಲದಿಂದ ತಮಿಳುನಾಡು ಭವನದವರೆಗೆ ಜಾಥಾ ನಡೆಸಿದರು. ದೆಹಲಿ ಸಂತ ಮಹಾಮಂಡಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಮುಖಂಡರ ಪ್ರತಿಕೃತಿಯನ್ನು ದಹನಮಾಡಿದ ಬಳಿಕ ಪೊಲೀಸರು ಆಫ್ರಿಕಾ ಅವೆನ್ಯೂ ಬಳಿ ಪ್ರತಿಭಟನನಿರತರನ್ನು ತಡೆದರು. ಸನಾತನ ಧರ್ಮದ ವಿರುದ್ಧ ಮುಂದೆ ಇಂತಹ ಹೇಳಿಕೆಯನ್ನು ನೀಡದಂತೆ ಪಕ್ಷಗಳ ನಾಯಕರು ಕ್ರಮವಹಿಸಬೇಕು ಎಂದು ಆಗ್ರಹಪಡಿಸಿದರು.
‘ರಾಜ್ಯ ಸರ್ಕಾರಗಳು ಕೂಡಾ ಈ ವಿಷಯದಲ್ಲಿ ಮೌನ ವಹಿಸಿರುವುದು ಆಶ್ಚರ್ಯ ಮೂಡಿಸಿದೆ’ ಎಂದು ದೆಹಲಿ ಸಂತ ಮಹಾಮಂಡಳದ ಅಧ್ಯಕ್ಷ ನಾರಾಯಣ ಗಿರಿ ಮಹಾರಾಜ್ ಅವರು ಅಸಮಾಧಾನ ವ್ಯಕ್ತಪಡಿಸಿದರು.