ನವದೆಹಲಿ: ‘ಸನಾತನ ಧರ್ಮವನ್ನು ನಾಶಪಡಿಸಲು ಯಾರೆಲ್ಲಾ ಸಿದ್ಧರಾಗಿದ್ದರೋ ಅವರು ತಮ್ಮನ್ನೇ ನಾಶಪಡಿಸಿಕೊಂಡಿದ್ದಾರೆ’ ಎಂದು ವಿಧಾನಸಭೆ ಚುನಾವಣಾ ಫಲಿತಾಂಶದ ಕುರಿತು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಪ್ರತಿಕ್ರಿಯೆ ನೀಡಿದೆ.
‘ಸನಾತನ ಧರ್ಮವನ್ನು ನಿರ್ಮೂಲನೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದವರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಲಾಗಿದೆ. ಮತ ಗಳಿಸಲು ವಿಫಲವಾದ ಮತ್ತು ಓಲೈಕೆ ರಾಜಕಾರಣದಲ್ಲೇ ಮುಳುಗಿರುವ ಪಕ್ಷಗಳಿಗೆ ಸನಾತನ ಧರ್ಮದ ಶಕ್ತಿ ಈಗ ಅರ್ಥವಾಗಿರುತ್ತದೆ’ ಎಂದು ವಿಎಚ್ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿರುವ ಡಿಎಂಕೆ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು, ‘ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು’ ಎಂದು ಸೆಪ್ಟೆಂಬರ್ನಲ್ಲಿ ಹೇಳಿಕೆ ನೀಡಿದ್ದರು. ಇದಕ್ಕೆ ಬಿಜೆಪಿ ಮತ್ತು ಹಿಂದೂ ಸಂಘಟನೆಗಳಿಂದ ಭಾರಿ ವಿರೋಧ ವ್ಯಕ್ತವಾಗಿತ್ತು.