ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧದ ಮಾನಹಾನಿ ಪ್ರಕರಣದ ಪ್ರಕ್ರಿಯೆಗಳಿಗೆ ನೀಡಲಾದ ತಡೆಯನ್ನು ಸೋಮವಾರ ವಿಸ್ತರಿಸಿರುವ ಸುಪ್ರೀಂ ಕೋರ್ಟ್, ಈ ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಕಾಲಾವಕಾಶ ನೀಡಿದೆ.
ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ‘ಈ ಕುರಿತು ವಿಚಾರಣೆ ನಡೆದ ಮಾರ್ಚ್ 11ರಿಂದ ಈವರೆಗೆ ಪ್ರಕರಣದ ಎರಡೂ ಪಕ್ಷಗಳವರು ರಾಜೀ ಸಂಧಾನದ ಕುರಿತು ಚರ್ಚಿಸಲು ಒಮ್ಮೆಯೂ ಭೇಟಿಯಾಗಿಲ್ಲ’ ಎಂದು ತಿಳಿಸಿದರು.
ಈ ವೇಳೆ ದೂರುದಾರರ ಪರ ವಕೀಲರು, ನ್ಯಾಯಾಲಯದ ಕೊನೆಯ ಕಲಾಪದ ಬಳಿಕ ಯಾರೂ ತಮ್ಮನ್ನು ಸಂಪರ್ಕಿಸಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ‘ಕೇಜ್ರಿವಾಲ್ ಅವರ ಕಡೆಯಿಂದ ದೂರುದಾರರನ್ನು ಸಂಪರ್ಕಿಸಲಾಗುವುದು’ ಎಂದು ಹೇಳಿ, ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಿತು.
2018ರಲ್ಲಿ ಯೂಟ್ಯೂಬರ್ ಧ್ರುವ ರಾಠೆ ಪ್ರಸಾರ ಮಾಡಿದ್ದ ವಿಡಿಯೊವನ್ನು ಮರು ಟ್ವೀಟ್ ಮಾಡಿದ ಆರೋಪದ ಮೇರೆಗೆ ಕೇಜ್ರಿವಾಲ್ ವಿರುದ್ಧ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಕೇಜ್ರಿವಾಲ್ ಅವರಿಗೆ ನೀಡಲಾಗಿದ್ದ ಸಮನ್ಸ್ ಅನ್ನು ಎತ್ತಿಹಿಡಿದಿದ್ದ ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು.