ನವದೆಹಲಿ (ಪಿಟಿಐ): ದೇಶದಲ್ಲಿ ಕೋವಿಡ್ ಪರಿಸ್ಥಿತಿಯು ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ, ಪ್ರಕರಣಗಳನ್ನು ದಾಖಲಿಸಲು ಇದ್ದ ಕಾಲಮಿತಿಯನ್ನು ಸಡಿಲಿಸಿ ನೀಡಿದ್ದ ಆದೇಶ ಹಿಂಪಡೆಯಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.
ಈ ಮೊದಲು ಮಾರ್ಚ್ 15, 2020ರಿಂದ ಅನ್ವಯವಾಗುವಂತೆ ಪ್ರಕರಣಗಳನ್ನು ದಾಖಲಿಸಲು ಇದ್ದ ಕಾಲಮಿತಿ ನಿಯಮ ಜಾರಿಗೊಳಿಸುವುದರಿಂದ ವಿನಾಯಿತಿ ನೀಡಿ ಕೋರ್ಟ್ ನಿರ್ದೇಶನ ನೀಡಿತ್ತು.
ಕೋವಿಡ್ 2ನೇ ಅಲೆಯ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ,ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರರಾವ್ ಮತ್ತು ಸೂರ್ಯಕಾಂತ್ ಅವರಿದ್ದ ಪೀಠವು ಏಪ್ರಿಲ್ 27, 2021ರಂದು ಆದೇಶ ಹೊರಡಿಸಿ, ಚುನಾವಣಾ ಅರ್ಜಿಗಳು ಸೇರಿ ಪ್ರಕರಣ ದಾಖಲಿಸಲು ನಿಗದಿಪಡಿಸಿದ್ದ ಕಾಲಮಿತಿಯನ್ನು ಸಡಿಲಿಸಿತ್ತು.
ಈ ಆದೇಶವನ್ನು ಅಕ್ಟೋಬರ್ 1ರಿಂದ ಅನ್ವಯವಾಗುವಂತೆ ಹಿಂಪಡೆಯಲಾಗುವುದು. ತರುವಾರ 90 ದಿನಗಳ ಒಳಗೆ ಪ್ರಕರಣ ದಾಖಲಿಸಬೇಕು ಎಂಬ ನಿಯಮವೇ ಜಾರಿಯಲ್ಲಿರುತ್ತದೆ ಎಂದು ಪೀಠವು ಸ್ಪಷ್ಟಪಡಿಸಿತು. ಈ ಕುರಿತು ಆದೇಶವನ್ನು ಹೊರಡಿಸಲಾಗುವುದು ಎಂದು ತಿಳಿಸಿತು.