ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ, ಪ್ರಜಾಪ್ರಭುತ್ವ ಉಳಿವಿವಾಗಿ ಜಾತ್ಯಾತೀತ ಪಕ್ಷಗಳು ಒಗ್ಗೂಡುತ್ತಿವೆ: ಡಿ. ರಾಜಾ

Published 19 ಜೂನ್ 2023, 7:04 IST
Last Updated 19 ಜೂನ್ 2023, 7:04 IST
ಅಕ್ಷರ ಗಾತ್ರ

ರಾಂಚಿ: 'ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಉದ್ದೇಶದಿಂದ ಜಾತ್ಯಾತೀತ ಪಕ್ಷಗಳು ಒಗ್ಗೂಡುತ್ತಿವೆಯೇ ಹೊರತು ಅಧಿಕಾರ ಹಿಡಿಯುವ ಆಸೆಯಿಂದಲ್ಲ' ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಸಿಪಿಐ) ಪ್ರಧಾನ ಕಾರ್ಯದರ್ಶಿ ಡಿ. ರಾಜ ತಿಳಿಸಿದ್ದಾರೆ.

ಪಿಟಿಐ ಸುದ್ದಿ ಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ದೇಶದ ಪರಿಸ್ಥಿತಿ ಸದ್ಯ ಚಿಂತಾಜನಕವಾಗಿದ್ದು, ಕೇಸರಿ ಪಕ್ಷವನ್ನು ಕೆಳಗಿಳಿಸುವ ಅಗತ್ಯವಿದೆ‘ ಎಂದು ಅಭಿಪ್ರಾಯಪಟ್ಟರು.

'ಬಿಜೆಪಿಯನ್ನು ಸೋಲಿಸಲು ಜಾತ್ಯಾತೀತ ಪ್ರಜಾಸತ್ತಾತ್ಮಕ ಪಕ್ಷಗಳು ಒಗ್ಗೂಡಬೇಕಾಗಿದೆ. ದೇಶದ ಭವಿಷ್ಯ, ಸಂವಿಧಾನ, ಪ್ರಜಾಪ್ರಭುತ್ವವನ್ನು ರಕ್ಷಿಸುವ ಉದ್ದೇಶದಿಂದ ಈ ಪಕ್ಷಗಳು ಜೊತೆಯಾಗಿಯೇ ವಿನಃ ಅಧಿಕಾರದ ಹಿಡಿಯುವ ಆಸೆಯಿಂದಲ್ಲ. ಬಿಜೆಪಿಯ ವಿರುದ್ಧದ ಹೋರಾಟಕ್ಕೆ ಇದೀಗ ವೇಗ ಹೆಚ್ಚುತ್ತಿದೆ' ಎಂದು ಹೇಳಿದರು.

'ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಆರ್‌ಆರ್‌ಎಸ್‌ಎಸ್‌ನ ಶಕ್ತಿ ಹೆಚ್ಚ ತೊಡಗಿತು. ಇದರ ಪರಿಣಾಮ ದೇಶದಲ್ಲಿ ದಲಿತರ, ಅಲ್ಪಸಂಖ್ಯಾತರ, ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚಾದವು. ದೇಶದ ಸಾರ್ವಜನಿಕ ವಲಯದ ಉದ್ಯಮಗಳು ಖಾಸಗೀಯವರಿಗೆ ಮಾರಲಾಯಿತು. ದೊಡ್ಡ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ಸರ್ಕಾರ ಬಹಿರಂಗವಾಗಿ ಒಲವು ತೋರಲು ಪ್ರಾರಂಭಿಸಿತು. ವಿಪಕ್ಷ ನಾಯಕರ ಧ್ವನಿಯನ್ನು ಅಡಗಿಸಲಾಯಿತು. ಇದೀಗ ಸಂಸತ್ತಿಗೂ ಬೆಲೆಯಿಲ್ಲದಂತಾಗಿದೆ' ಎಂದು ವಿಷಾದ ವ್ಯಕ್ತಪಡಿಸಿದರು.

ಮಣಿಪುರ ಹಿಂಸಾಚಾರದ ಬಗ್ಗೆ ಮಾತನಾಡಿದ ಅವರು, 'ಮಣಿಪುರ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಡಬಲ್ ಎಂಜಿನ್ ಸರ್ಕಾರ ದೊಡ್ಡ ಪ್ರಗತಿ ಸಾಧಿಸುತ್ತಿದೆ ಎಂದು ಮೋದಿ ಹೇಳಿಕೊಳ್ಳುತ್ತಾ ಬರುತ್ತಿದ್ದಾರೆ. ಆದರೆ, ‍ಮಣಿಪುರ ಪರಿಸ್ಥಿತಿ ನೋಡಿದರೆ ಡಬಲ್‌ ಎಂಜಿನ್‌ ಸರ್ಕಾರದ ಹಣೆಬರಹ ತಿಳಿಯುತ್ತದೆ. ಮಣಿಪುರದಲ್ಲಿ ಪರಿಸ್ಥಿತಿ ಬಿಗಾಡಾಯಿಸಲು ಸರ್ಕಾರವೇ ಕಾರಣವಾಗಿದೆ. ಎಲ್ಲ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಬೇಕು. ಶಾಂತಿ, ಸೌಹಾರ್ದತೆ ಕಾಪಾಡಲು ಎರಡೂ ಸಮುದಾಯವರಿಗೂ ಮನವಿ ಮಾಡಬೇಕು' ಎಂದು ಹೇಳಿದರು.

ಕುಸ್ತಿಪಟುಗಳ ಪ್ರತಿಭಟನೆಯ ಬಗ್ಗೆ ಮಾತನಾಡಿದ ಅವರು, 'ದೇಶಕ್ಕೆ ಕೀರ್ತಿ ತಂದ ಕುಸ್ತಿಪಟುಗಳಿಗೆ ಏನಾಗುತ್ತಿದೆ ಎನ್ನುವುದು ನಮ್ಮ ಕಣ್ಣ ಮುಂದೆಯೇ ಇದೆ. ಇದುವರೆಗೂ ಈ ವಿಷಯದ ಬಗ್ಗೆ ಪ್ರಧಾನಿ ಮೋದಿ ಮೌನ ಮುರಿದಿಲ್ಲ. ಉತ್ತಮ ಆಡಳಿತ ನೀಡುವಲ್ಲಿ ಬಿಜೆಪಿ ಸರ್ಕಾರ ಸೋತಿದೆ. ದೇಶಾದ್ಯಂತ ಬಿಜೆಪಿ ವಿರುದ್ಧ ಅಸಮಾಧಾನ ಬೆಳೆಯುತ್ತಿದೆ' ಎಂದು ಡಿ.ರಾಜ ಕಿಡಿಕಾರಿದರು.

'ವಿರೋಧ ಪಕ್ಷಗಳ ನಾಯಕರನ್ನು ಬೆದಿರಸಿ ಹತೋಟಿಯಲ್ಲಿಡುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ. ಜಾರ್ಖಂಡ್, ದೆಹಲಿ ಮತ್ತು ತಮಿಳುನಾಡಿನಲ್ಲಿ ಚುನಾಯಿತ ಸರ್ಕಾರದ ನಾಯಕರುಗಳಿಗೆ ಕಿರುಕುಳ ನೀಡಲು ತನ್ನೆಲ್ಲಾ ಬತ್ತಳಿಕೆಯನ್ನು ಪ್ರಯೋಗಿಸುತ್ತಿದೆ. ಈ ರೀತಿ ಮಾಡುವುದರಿಂದ ತಾನು ಎಲ್ಲರನ್ನು ಹತೋಟಿಯಲ್ಲಿಡಬಹುದು ಎಂದು ಕೇಂದ್ರ ನಾಯಕರು ಭಾವಿಸಿದ್ದಾರೆ. ಆದರೆ ಅದು ಭ್ರಮೆ. ಜನರು ಪ್ರಬುದ್ಧರಾಗಿದ್ದು, ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ' ಎಂದರು.

ಜಾತ್ಯಾತೀತ ಪಕ್ಷಗಳು ಒಂದಾಗಿ ಗೆದ್ದರೆ ನಾಯಕತ್ವದ ಬಗ್ಗೆ ಗೊಂದಲ ಉಂಟಾಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ. ರಾಜಾ, '1996ರಲ್ಲಿ 13 ಪಕ್ಷಗಳು ಒಂದಾಗಿ ಚುನಾವಣೆಯಲ್ಲಿ ಗೆದ್ದು ‘ಯುನೈಟೆಡ್‌ ಫ್ರಂಟ್‌‘ ಸರ್ಕಾರ ರಚನೆ ಮಾಡಿದಾಗ ನಮಗೆ ಯಾವುದೇ ತೊಂದರೆ ಕಾಣಿಸಿರಲಿಲ್ಲ. ಗೆದ್ದ ನಂತರವೇ ನಾಯಕತ್ವದ ಬಗ್ಗೆ ಚರ್ಚಿಸಲಾಗಿತ್ತು. ಸಣ್ಣ ಸಣ್ಣ ಸಮಸ್ಯೆಗಳನ್ನು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುತಿತ್ತು. ಎಲ್ಲವೂ ಸುಸೂತ್ರವಾಗಿ ನಡೆದುಕೊಂಡು ಹೋಗಿತ್ತು' ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

'ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಜೂನ್ 23ರಂದು ಪಾಟ್ನಾದಲ್ಲಿ ವಿಪಕ್ಷ ನಾಯಕರ ಸಭೆ ಕರೆದಿದ್ದು, ಸಿಪಿಐ ಪಕ್ಷದ ಪರವಾಗಿ ನಾನು ಪ್ರತಿನಿಧಿಸಲಿದ್ದೇನೆ. ಈ ಸಭೆಯಲ್ಲಿ ಹಲವು ರಾಜ್ಯದ ಮುಖ್ಯಮಂತ್ರಿಗಳು, ವಿವಿಧ ಪಕ್ಷಗಳು ಉನ್ನತ ನಾಯಕರು ಭಾಗವಹಿಸಲಿದ್ದಾರೆ' ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT