ನವದೆಹಲಿ: ತಮ್ಮ ವಿರುದ್ಧದ ಪ್ರಕರಣ ತನಿಖೆಗೆ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಸ್ತೃತ ಪೀಠ ರಚಿಸಬೇಕು ಎಂದು ಪಶ್ಚಿಮ ಬಂಗಾಳದ ಐಪಿಎಸ್ ಅಧಿಕಾರಿ ರಾಜೀವ್ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
ಆದರೆ, ರಾಜ್ಯದಲ್ಲಿ ವಕೀಲರ ಮುಷ್ಕರ ಮುಗಿಯುವ ತನಕ ಅವರನ್ನು ಬಂಧಿಸದಂತೆ ಕೋರ್ಟ್ ಮಂಗಳವಾರ ಮಧ್ಯಂತರ ತಡೆ ನೀಡಿದೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತರಾಗಿರುವ ಕುಮಾರ್ ಅವರನ್ನು ಶಾರದಾ ಚಿಟ್ಫಂಡ್ ಹಗರಣದ ಸಾಕ್ಷಿಗಳನ್ನು ತಿದ್ದುಪಡಿ ಮಾಡಿದ ಆರೋಪದ ಮೇಲೆ ಸಿಬಿಐ ವಿಚಾರಣೆ ನಡೆಸಿತ್ತು.
ವಕೀಲರು ಮುಷ್ಕರ ನಡೆಸುತ್ತಿರುವ ಕಾರಣ ಅವರ ಬಂಧನಕ್ಕೆ ಕೋರ್ಟ್ ತಡೆ ನೀಡಿದೆ. ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠ ರಚಿಸುವ ಸಂಬಂಧ ಸೆಕ್ರೆಟರಿ ಜನರಲ್ ಅವರಿಗೆ ಮನವಿ ಸಲ್ಲಿಸಲು ಸೂಚಿಸಿದೆ.