ಮುಂಬೈ: ಮಹಾರಾಷ್ಟ್ರದಲ್ಲಿ ಸಾಮಾಜಿಕ ಶಾಂತಿ ಕದಡಲು ಮತ್ತು ಮತದಾರರ ಧ್ರುವೀಕರಣಕ್ಕಾಗಿ ಗಲಭೆಗಳ ಪ್ರಯೋಗಾಲಯ ಸೃಷ್ಟಿಸಲು ಬಿಜೆಪಿ ಹಾಗೂ ಬೆಂಬಲಿಗರು ಯತ್ನಿಸುತ್ತಿದೆ ಎಂದು ಶಿವಸೇನಾ (ಉದ್ಧವ್ ಠಾಕ್ರೆ ಬಣ) ಆರೋಪಿಸಿದೆ.
ಪಕ್ಷದ ಮುಖವಾಣಿ 'ಸಾಮ್ನಾ'ದಲ್ಲಿ ಈ ಕುರಿತು ಉಲ್ಲೇಖ ಮಾಡಲಾಗಿದ್ದು, ಸರ್ಕಾರ ರಚಿಸಲು ಶಿವಸೇನಾ ಪಕ್ಷವನ್ನು ಒಡೆದಂತೆಯೇ ಸಮಾಜವನ್ನು ವಿಭಜಿಸುವ ಮೂಲಕ ಚುನಾವಣೆ ಎದುರಿಸಲು ಬಿಜೆಪಿ ಬಯಸುತ್ತಿದೆ ಎಂದು ಆರೋಪಿಸಿದೆ.
ಕಳೆದ ವರ್ಷ ಬಿಜೆಪಿ ಬೆಂಬಲದೊಂದಿಗೆ ಏಕನಾಥ ಶಿಂದೆ ಸಿಎಂ ಆಗಿದ್ದರು.
ಸಂವಿಧಾನ, ರಾಷ್ಟ್ರೀಯ ಏಕತೆ ಮತ್ತು ಧಾರ್ಮಿಕ ಸಹಬಾಳ್ವೆಯನ್ನು ಕಡೆಗಣಿಸಿ ಅಧಿಕಾರಕ್ಕಾಗಿ ಏನನ್ನೂ ಮಾಡುವವರ ಬಗ್ಗೆ ರಾಜ್ಯದ ಜನತೆ ಎಚ್ಚರ ವಹಿಸಬೇಕು ಎಂದು ಹೇಳಿದೆ.
ಅಹ್ಮದ್ನಗರ ಜಿಲ್ಲೆಯ ಅಕೋಲಾ ನಗರ ಮತ್ತು ಶೆವ್ಗಾಂವ್ ಗ್ರಾಮದಲ್ಲಿ ನಡೆದ ಕೋಮು ಘರ್ಷಣೆಯಲ್ಲಿ ಒಬ್ಬರು ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದರು. ಈ ಬಗ್ಗೆಯೂ ಉಲ್ಲೇಖ ಮಾಡಲಾಗಿದ್ದು, ಕೋಮು ಸಂಘರ್ಷ ಹರಡುವ ಮೂಲಕ ಮತದಾರರ ಧ್ರುವೀಕರಣಕ್ಕೆ ಯತ್ನಿಸುತ್ತಿದೆ ಎಂದು ಆರೋಪಿಸಲಾಗಿದೆ.