ತಂಜಾವೂರು, ತಮಿಳುನಾಡು : ಹಿಂದೂಮಹಾಸಾಗರ ತೀರ ಪ್ರದೇಶದಲ್ಲಿ ಕಣ್ಗಾವಲು ಇರಿಸಲು ಭಾರತೀಯ ವಾಯುಪಡೆಯು ತಂಜಾವೂರಿನಲ್ಲಿ ಸುಖೊಯ್ 30 ಎಂಕೆಐ ಯುದ್ಧವಿಮಾನಗಳ ಕಾರ್ಯಾಚರಣೆ ಘಟಕ ತೆರೆದಿದೆ. ಇದು, ದಕ್ಷಿಣ ಭಾರತದ ಮೊದಲ ಯುದ್ಧವಿಮಾನ ನೆಲೆ ಎನಿಸಿಕೊಂಡಿದೆ.
ಭಾರತೀಯ ರಕ್ಷಣಾ ಸನ್ನದ್ಧತೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ಕಾರ್ಯಾಚರಣೆ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಈ ಯುದ್ಧ ವಿಮಾನವನ್ನು ಇಲ್ಲಿನ ವಾಯುಪಡೆ ಕೇಂದ್ರಕ್ಕೆ ಸೇರ್ಪಡೆಗೊಳಿಸಲಾಗಿದೆ.
ಹಿಂದೂ ಮಹಾಸಾಗರ ವಲಯದಲ್ಲಿರುವ ದೇಶದ ದ್ವೀಪ ಪ್ರದೇಶಗಳು ಮತ್ತು ಸಾಗರ ಗಡಿ ಪ್ರದೇಶಗಳನ್ನು ರಕ್ಷಿಸುವ ಮತ್ತು ಕಾಯುವ ಕಾರ್ಯವನ್ನು ಈ ಯುದ್ಧವಿಮಾನಗಳ ಮೂಲಕ ಮಾಡಲಾಗುತ್ತದೆ ಎಂದು ರಕ್ಷಣಾ ಇಲಾಖೆ ಪ್ರಕಟಣೆ ತಿಳಿಸಿದೆ.
ಇದು ಎಲ್ಲಾ ವಾತಾವರಣದಲ್ಲಿಯೂ, ಬಹುಪಾತ್ರದ ಯುದ್ಧ ಕಾರ್ಯಾಚರಣೆ ನಡೆಸಲು ಶಕ್ತವಾಗಿದ್ದು, ವೈಮಾನಿಕ ದಾಳಿ, ಕಡಲ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ.
ಈ ಯುದ್ಧವಿಮಾನವನ್ನು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಸಮ್ಮುಖದಲ್ಲಿ ಸೇರ್ಪಡೆಗೊಳಿಸಲಾಯಿತು.ವಾಯುಪಡೆಯ ಮುಖ್ಯಸ್ಥ ರಾಕೇಶ್ ಕುಮಾರ್ ಸಿಂಗ್ ಬದೌರಿಯಾ ಉಪಸ್ಥಿತರಿದ್ದರು.