ನವದೆಹಲಿ: ಕಾಂಗ್ರೆಸ್ ನಾಯಕ ದೇವೇಂದ್ರ ಚೌರಾಸಿಯಾ ಕೊಲೆ ಪ್ರಕರಣದಲ್ಲಿ ಬಿಎಸ್ಪಿ ಶಾಸಕಿಯ ಪತಿಗೆ ನೀಡಿದ್ದ ಜಾಮೀನು ಅನ್ನು ಸುಪ್ರೀಂಕೋರ್ಟ್ ಗುರುವಾರ ರದ್ದುಗೊಳಿಸಿದೆ.
ನ್ಯಾಯಾಂಗ ವ್ಯವಸ್ಥೆಯಿಂದ ಆರೋಪಿಯನ್ನು ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಮಧ್ಯಪ್ರದೇಶದ ಬಿಎಸ್ಪಿ ಶಾಸಕಿ ರಂಬಾನಿ ಸಿಂಗ್ ಅವರ ಪತಿ ಗೋವಿಂದ್ ಸಿಂಗ್ ಅವರನ್ನುನ್ಯಾಯಯುತ ವಿಚಾರಣೆಗಾಗಿ ಬೇರೆ ಜೈಲಿಗೆ ವರ್ಗಾಯಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ವೈ ಚಂದ್ರಚೂಡ್ ಮತ್ತು ಎಂ.ಆರ್ ಶಾ ಅವರ ಪೀಠವು,‘ ಮಧ್ಯಪ್ರದೇಶ ಹೈಕೋರ್ಟ್ ನೀಡಿದ ಜಾಮೀನು ಆದೇಶವನ್ನು ರದ್ದುಗೊಳಿಸಿದೆ. ಅಲ್ಲದೆ ಹೈಕೋರ್ಟ್, ಕಾನೂನು ತತ್ವಗಳನ್ನು ದುರುಪಯೋಗಪಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
‘ಆರೋಪಿಗೆ ಜಾಮೀನು ನೀಡುವಲ್ಲಿ ಹೈಕೋರ್ಟ್ ತಪ್ಪು ಮಾಡಿದೆ.ಹಾಗಾಗಿ ಈ ಜಾಮೀನು ಅನ್ನು ರದ್ದುಗೊಳಿಸಲಾಗಿದೆ’ ಎಂದು ಪೀಠ ಹೇಳಿದೆ.
‘ಈ ಪ್ರಕರಣ ಸಂಬಂಧ ದಮೋಹ್ ಎಸ್ಪಿ ಮತ್ತು ಅವರ ಅಧೀನದ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ’ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಫೆಬ್ರುವರಿ 8 ರಂದು ದೂರಿದ್ದರು.
ಈ ದೂರಿನ ಬಗ್ಗೆಯೂ ಒಂದು ತಿಂಗಳೊಳಗೆ ತನಿಖೆ ನಡೆಸುವಂತೆ ಪೊಲೀಸರಿಗೆ ನ್ಯಾಯಾಲಯವು ನಿರ್ದೇಶಿಸಿದೆ.