ನವ ರಾಯಪುರ (ಪಿಟಿಐ): ‘ಭಾರತ್ ಜೋಡೊ’ ಯಾತ್ರೆಯ ಯಶಸ್ಸಿನ ಬಳಿಕ ಅಂಥದ್ದೇ ಮತ್ತೊಂದು ಯಾತ್ರೆ ಹಮ್ಮಿಕೊಳ್ಳುವುದಾಗಿ ಕಾಂಗ್ರೆಸ್ ಪ್ರಸ್ತಾಪಿಸಿದ ಬೆನ್ನಲ್ಲೇ, ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಯಾತ್ರೆಗೆ ಸಿದ್ಧರಾಗಿ, ಪಕ್ಷದ ಅಧಿಕೃತ ಕರೆಗಾಗಿ ಕಾಯುತ್ತಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯಶಸ್ವಿಯಾಗಿ ‘ಭಾರತ ಜೋಡೊ’ ಯಾತ್ರೆ ನಡೆದ ನಂತರ ಅಂಥದ್ದೇ ಮತ್ತೊಂದು ಯಾತ್ರೆ ನಡೆಸುವ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಚರ್ಚೆಯಾಗುತ್ತಿತ್ತು. ಈ ಮಧ್ಯೆ ರಾಯಪುರದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಮಹಾಧಿವೇಶನದಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇದೇ ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೇ ಕಾರ್ಯಕರ್ತರಲ್ಲಿ ಉತ್ಸಾಹ ಗರಿಗೆದರಿದೆ.
‘ನಮ್ಮ ಬ್ಯಾಗ್ ಸಿದ್ಧವಾಗಿದೆ. ಪಕ್ಷದಿಂದ ಕರೆ ಬಂದ ಕೂಡಲೇ ಹೊರಡುತ್ತೇವೆ’ ಎಂದು ಎಐಸಿಸಿ ಸದಸ್ಯ ವೈಭವ್ ವಾಲಿಯಾ ತಿಳಿಸಿದ್ದಾರೆ.
‘ದೇಶದ ಪೂರ್ವ ಗಡಿಯಿಂದ ಪಶ್ಚಿಮ ಗಡಿಯವರೆಗೆ ಮತ್ತೊಂದು ಯಾತ್ರೆ ನಡೆಸುವ ವಿಚಾರವನ್ನು ಪಕ್ಷ ಪರಿಶೀಲಿಸುತ್ತಿದೆ’ ಎಂದು ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಭಾನುವಾರ ತಿಳಿಸಿದ್ದರು.