ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾರೇ ಜಹಾಂ ಸೇ ಅಚ್ಚಾ..’ ಖ್ಯಾತಿಯ ಕವಿಯ ಪಠ್ಯಕ್ಕೆ ಕೊಕ್‌

ದೆಹಲಿ ವಿ.ವಿ. ನಿರ್ಧಾರ: ಇಕ್ಬಾಲ್‌ ಪಾಕ್‌ ಕವಿ ಎಂದ ಕುಲಪತಿ
Published 27 ಮೇ 2023, 20:20 IST
Last Updated 27 ಮೇ 2023, 20:20 IST
ಅಕ್ಷರ ಗಾತ್ರ

ನವದೆಹಲಿ: ದೇಶಭಕ್ತಿಯ ಭಾವನೆಯನ್ನು ಅಭಿವ್ಯಕ್ತಗೊಳಿಸುವ ಜನಪ್ರಿಯ ‘ಸಾರೇ ಜಹಾಂ ಸೇ ಅಚ್ಚಾ...’ ಗೀತೆಯನ್ನು ರಚಿಸಿದ್ದ ಕವಿ ಇಕ್ಬಾಲ್‌ ಅವರನ್ನು ಕುರಿತ ಪಠ್ಯವನ್ನು ದೆಹಲಿ ವಿಶ್ವವಿದ್ಯಾಲಯವು ಬಿ.ಎ ಪದವಿ ಪಠ್ಯಕ್ರಮದಿಂದ ಕೈಬಿಡಲು ತೀರ್ಮಾನಿಸಿದೆ. 

ಕವಿ ಇಕ್ಬಾಲ್ ಅವರು ಅವಿಭಜಿತ ಭಾರತದ ಸಿಯಾಲ್‌ಕೋಟ್‌ನಲ್ಲಿ 1877ರಲ್ಲಿ ಜನಿಸಿದ್ದರು. ‘ಸಾರೇ ಜಹಾಂ ಸೇ ಅಚ್ಚಾ.. ಹಿಂದೂಸ್ತಾನ್‌ ಹಮಾರಾ.. ಹಮಾರಾ’ ಗೀತೆಯ ಕರ್ತೃವಾಗಿದ್ದು, ಈ ಗೀತೆಯ ಮೂಲಕ ಜನಮಾನಸದಲ್ಲಿ ನೆಲೆಸಿದ್ದಾರೆ. 

ಬಿ.ಎ ಪದವಿಯ 6ನೇ ಸೆಮಿಸ್ಟರ್‌ನ ರಾಜ್ಯಶಾಸ್ತ್ರ ಪಠ್ಯಕ್ರಮದಲ್ಲಿ ‘ಮಾಡರ್ನ್‌ ಇಂಡಿಯಾ ಪೊಲಿಟಿಕಲ್‌ ಥಾಟ್’ ಶೀರ್ಷಿಕೆಯಡಿ ಇದ್ದ ಇಕ್ಬಾಲ್‌ ಅವರನ್ನು ಕುರಿತ ಪಠ್ಯ ಕೈಬಿಡುವ ನಿರ್ಣಯವನ್ನು ದೆಹಲಿ ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ ಸಭೆಯು ಶುಕ್ರವಾರ ಅಂಗೀಕರಿಸಿತು.

ವಿಶ್ವವಿದ್ಯಾಲಯದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಕುಲಪತಿ ಯೋಗೇಶ್ ಸಿಂಗ್ ಅವರು, ‘ದೇಶವನ್ನು ವಿಭಜಿಸುವ ಚಿಂತನೆಗೆ ಅಡಿಗಲ್ಲು ಹಾಕಿದವರ ವಿವರ ಪಠ್ಯಕ್ರಮದಲ್ಲಿ ಇರಕೂಡದು’ ಎಂದು ಪ್ರತಿಪಾದಿಸಿದರು.

‘ಇಕ್ಬಾಲ್‌ ಅವರು ಪಾಕಿಸ್ತಾನದ ಕವಿ. ಮುಸ್ಲಿಂ ಲೀಗ್‌ ಮತ್ತು ಪಾಕಿಸ್ತಾನದ ಪರ ಜನಾಂದೋಲನವನ್ನು ಬೆಂಬಲಿಸಿಯೂ ಅವರು ಪದ್ಯವನ್ನು ಬರೆದಿದ್ದಾರೆ. ದೇಶವನ್ನು ವಿಭಜಿಸಿ, ಪಾಕಿಸ್ತಾನ ರಾಷ್ಟ್ರ ರಚಿಸಬಹುದು ಎಂಬ ಸಲಹೆಯನ್ನು ಮೊದಲಿಗೆ ನೀಡಿದ್ದೇ ಕವಿ ಇಕ್ಬಾಲ್. ವಿದ್ಯಾರ್ಥಿಗಳು ಅವರ ಬಗ್ಗೆ ಅಧ್ಯಯನ ಮಾಡುವ ಬದಲು, ದೇಶದ ಸಾಧಕರನ್ನು ಕುರಿತು ಅಧ್ಯಯನ ಮಾಡಲಿ‘ ಎಂದು ಕುಲಪತಿ ಹೇಳಿದರು.

‘ಶೈಕ್ಷಣಿಕ ಮಂಡಳಿ ಸಭೆಯು ಶುಕ್ರವಾರ ಬೆಳಿಗ್ಗೆ 10.30ಕ್ಕೆ ಆರಂಭವಾಗಿ, 15 ಗಂಟೆ ಕಾಲ ಚರ್ಚಿಸಿತು. ಅಂತಿಮವಾಗಿ ಪಠ್ಯವನ್ನು ಕೈಬಿಡುವ ಕುರಿತ ಕುಲಪತಿ ಮಂಡಿಸಿದ ನಿರ್ಣಯವನ್ನು ಅವಿರೋಧವಾಗಿ ಅಂಗೀಕರಿಸಿತು’ ಎಂದು ವಿ.ವಿಯ ಹೇಳಿಕೆ ತಿಳಿಸಿದೆ.

‘ಶೈಕ್ಷಣಿಕ ಮಂಡಳಿ ಸಭೆಯು ಶುಕ್ರವಾರ ಮಧ್ಯರಾತ್ರಿ 1.20ಕ್ಕೆ ಮುಗಿಯಿತು. ಪದವಿ ಹಂತದ ವಿವಿಧ ಕೋರ್ಸ್‌ಗಳ ನಾಲ್ಕು, ಐದು ಮತ್ತು ಆರನೇ ಸೆಮಿಸ್ಟರ್‌ ಪಠ್ಯಕ್ರಮ ಪರಿಷ್ಕರಿಸುವ ಕಾರ್ಯಸೂಚಿಗಳಿಗೆ ಅಂಗೀಕಾರ ನೀಡಿತು’ ಎಂದು ಹೇಳಿಕೆಯು ವಿವರಿಸಿದೆ.

ತತ್ವಶಾಸ್ತ್ರ ಪಠ್ಯಕ್ರಮಗಳಿಗೆ ಅನುಮೋದನೆ: ಇದೇ ಸಂದರ್ಭದಲ್ಲಿ ತತ್ವಶಾಸ್ತ್ರ ವಿಭಾಗವು ಬಿ.ಎ ಪದವಿ ಕೋರ್ಸ್‌ಗೆ ಪರಿಚಯಿಸಲು ಸೂಚಿಸಿ ಮಂಡಿಸಿದ ಪಠ್ಯಕ್ರಮಗಳಿಗೂ ಅವಿರೋಧವಾಗಿ ಅನುಮೋದನೆ ನೀಡಿತು. ವಿವಿಧ ಪದವಿ ಕೋರ್ಸ್‌ಗಳ ತತ್ವಶಾಸ್ತ್ರ ವಿಭಾಗದಲ್ಲಿ ‘ಫಿಲಾಸಫಿ ಆಫ್‌ ಡಾ.ಅಂಬೇಡ್ಕರ್’, ‘ಫಿಲಾಸಫಿ ಆಫ್‌ ಮಹಾತ್ಮಗಾಂಧಿ’, ‘ಫಿಲಾಸಫಿ ಆಫ್ ಸ್ವಾಮಿ ವಿವೇಕಾನಂದ’ ಸೇರಿವೆ.

ಈ ಪಠ್ಯಗಳಿಗೆ ಅನುಮೋದನೆ ನೀಡುವ ಜೊತೆಗೆ, ಸಾವಿತ್ರಿಬಾಯಿ ಫುಲೆ ಅವರನ್ನು ಕುರಿತ ಅಡಕವನ್ನು ಪಠ್ಯಕ್ರಮದಲ್ಲಿ ಸೇರ್ಪಡೆಗೊಳಿಸಲು ಚಿಂತನೆ ನಡೆಸಬೇಕು ಎಂದು ಕುಲಪತಿ ಅವರು ವಿಭಾಗದ ಮುಖ್ಯಸ್ಥರಿಗೆ ಸಲಹೆ ಮಾಡಿದರು.

‘ಸ್ವಾತಂತ್ರ್ಯ ಹೋರಾಟ ದೇಶ ವಿಭಜನೆ ಅಧ್ಯಯನಕ್ಕಾಗಿ ಪೀಠ ಸ್ಥಾಪನೆ’
ವಿಶ್ವವಿದ್ಯಾಲಯದ ಹೇಳಿಕೆಯ ಪ್ರಕಾರ ವಿ.ವಿ.ಯಲ್ಲಿ ‘ಸ್ವಾತಂತ್ರ್ಯ ಮತ್ತು ವಿಭಜನೆ ಅಧ್ಯಯನ ಕೇಂದ್ರ’ ಪೀಠವನ್ನು ಸ್ಥಾಪಿಸುವ ಪ್ರಸ್ತಾಪಕ್ಕೂ ಶೈಕ್ಷಣಿಕ ಮಂಡಳಿ ಸಭೆಯು ಅನುಮೋದನೆ ನೀಡಿತು. ‘ಸ್ವಾತಂತ್ರ್ಯ ಹೋರಾಟ ಸಂದರ್ಭದ ತೆರೆಮರೆಯ ಸಾಧಕರು ಸ್ವಾತಂತ್ರ್ಯ ಚಳವಳಿ ಹಾಗೂ ಇತಿಹಾಸದಲ್ಲಿ ದಾಖಲಾಗದೇ ಉಳಿದ ವಿವಿಧ ಅಂಶಗಳು ಬೆಳವಣಿಗೆಗಳ ಸಂಶೋಧನೆಯ ನಿಟ್ಟಿನಲ್ಲಿ ಈ ಕೇಂದ್ರವು ಕಾರ್ಯತತ್ಪರವಾಗಲಿದೆ’ ಎಂದು ತಿಳಿಸಿದೆ. ‘ದೇಶ ವಿಭಜನೆಯ ಸಂದರ್ಭದಲ್ಲಿ ಘಟಿಸಿದ ದುರಂತ ಘಟನೆಗಳ ಕುರಿತು ಆಳವಾದ ಸಂಶೋಧನೆ ಅಧ್ಯಯನ ನಡೆಯಲಿದೆ. ಇದಕ್ಕೆ ಪೂರಕವಾಗಿ ದೇಶ ವಿಭಜನೆಯ ಕಾಲಘಟ್ಟದ ಜನರ ಧ್ವನಿಯ ಮೂಲಕ ‘ಮೌಖಿಕ ಇತಿಹಾಸ’ವನ್ನು ದಾಖಲಿಸಲಾಗುತ್ತದೆ’ ಎಂದು ತಿಳಿಸಿದೆ. ಒಟ್ಟಾರೆಯಾಗಿ ಸ್ವಾತಂತ್ರ್ಯದ ಗುರಿ ಸಾಧನೆಯ ಮಾರ್ಗದಲ್ಲಿ ಎದುರಾದ ಸವಾಲುಗಳನ್ನು ಅರ್ಥಮಾಡಿಕೊಳ್ಳುವುದು ದೇಶದ ಭೌಗೋಳಿಕ  ವಿಭಜನೆಯಿಂದ ಜನರಿಗಾದ ಭಾವನಾತ್ಮಕ ಆರ್ಥಿಕ ಮತ್ತು ಸಾಂಸ್ಕೃತಿಕ ನಷ್ಟ ಪರಿಣಾಮ ತಿಳಿಯುವುದು ಇದರ ಉದ್ದೇಶವಾಗಿದೆ. ಸ್ವಾತಂತ್ರ್ಯ ಹೋರಾಟ ದೇಶ ವಿಭಜನೆಯ ಪರಿಣಾಮವನ್ನು ಪ್ರಮುಖವಾಗಿ ಕೇಂದ್ರವು ಅಧ್ಯಯನ ಮಾಡಲಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT